ಫಿಕ್ಸಿಂಗ್: ಸುರೇಶ್ ರೈನಾ ಮೇಲೆ ಪೊಲೀಸರ ಕಣ್ಣು
ನವದೆಹಲಿ, ಮೇ. 29: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಉತ್ತರ ಪ್ರದೇಶದ ಆಟಗಾರರು ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಅನುಮಾನ ಪಟ್ಟಿದ್ದು, ಆರ್ ಸಿಬಿ ತಂಡದ ಆರ್.ಪಿ ಸಿಂಗ್ ಸೇರಿದಂತೆ ಐಪಿಎಲ್ ನಲ್ಲಿ ಭಾಗವಹಿಸಿದ್ದ ಯುಪಿಯ 10 ಆಟಗಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಶಂಕಿತರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಪ್ರಮುಖವಾಗಿದ್ದಾರೆ.
ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಕುಮಾರ್, ಆರ್.ಪಿ ಸಿಂಗ್ (ಆರ್ಸಿಬಿ) ಸೇರಿದಂತೆ ಸುರೇಶ್ ರೈನಾ (ಸಿಎಸ್ಕೆ), ಭುವನೇಶ್ವರ್ ಕುಮಾರ್ (ಪುಣೆ ವಾರಿಯರ್ಸ್), ಅಲಿ ಮುರ್ತಾಜಾ (ಪುಣೆ ವಾರಿಯರ್ಸ್), ಪ್ರವಿಣ್ ಕುಮಾರ್ (ಕಿಂಗ್ಸ್ XI ಪಂಜಾಬ್), ಪಿಯೂಶ್ ಚಾವ್ಲಾ (ಪಂಜಾಬ್), ಇಮ್ತಿಯಾಜ್ ಅಹಮದ್ (ಸಿಎಸ್ಕೆ), ಅಂಕಿತ್ ಸಿಂಗ್ ರಜ್ಪೂತ್ (ಸಿಎಸ್ಕೆ) ಹಾಗೂ ಏಕಲವ್ಯ ದ್ವಿವೇದಿ (ಪುಣೆ ವಾರಿಯರ್ಸ್) ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನಿಖಾ ಏಜೆನ್ಸಿ ಮಾರ್ಗದರ್ಶನದಲ್ಲಿ ನಾವು ಸ್ವಾತಂತ್ರವಾಗಿ ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ವಾರಣಾಸಿ, ಮೀರತ್, ಕಾನ್ಪುರ್ ಮತ್ತು ಗಾಜಿಯಾಬಾದ್ ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಗುಂಪುಗಳನ್ನು ಬಂಧಿಸಲಾಗಿದೆ.
ನಾವು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಕೆಲವರು ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಈ ಕುರಿತು ನಾವು ಈಗಲೇ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅರುಣ್ ತಿಳಿಸಿದರು.
ರೈನಾ ಅವರ ಮೇಲೆ ಈ ಹಿಂದೆ ಅನುಮಾನ ವ್ಯಕ್ತವಾಗಿತ್ತು. ವಿದೇಶಿ ಪ್ರವಾಸದ ವೇಳೆ ಬುಕ್ಕಿಗಳ ಸಂಪರ್ಕ ಹೊಂದಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ, ಬಿಸಿಸಿಐ ಯಾವುದೇ ಕ್ರಮ ಜರುಗಿಸದೆ ಅಲ್ಲಗೆಳೆದಿತ್ತು.
ತನಿಖಾ ಸಮಿತಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳ ತನಿಖೆ ನಡೆಸಲು ಐಪಿಎಲ್ ಆಡಳಿತ ಮಂಡಳಿಯು ನಿನ್ನೆ ಮೂರು ಸದಸ್ಯರಿರುವ ತನಿಖಾ ಸಮಿತಿಯನ್ನ ರಚಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳ ಮಾಲೀಕರು ಹಾಗೂ ಗುರುನಾಥ್ ಮೇಯಪ್ಪನ್ ವಿರುದ್ಧ ಬಿಸಿಸಿಐ ಸಲ್ಲಿಸಿರುವ ದೂರುಗಳನ್ನ ಈ ಸಮಿತಿ ಪರಿಶೀಲಿಸಲಿದೆ.
ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಟಿ.ಜಯರಾಮ್ ಚೌಟಾ ಮತ್ತು ಆರ್.ಬಾಲಸುಬ್ರಮಣಿಯಂ ಮತ್ತು ಬಿಸಿಸಿ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಈ ತನಿಖಾ ಸಮಿತಿಯ ಸದಸ್ಯರಾಗಿರುತ್ತಾರೆ
ಇಂಡಿಯನ್ ಪ್ರಿಮಿಯರ್ ಲೀಗ್ ಟಿ20 ಟೂರ್ನಿ ಯಶಸ್ವಿಯಾಗುತ್ತಿದ್ದಂತೆ ಅದರ ಬೆನ್ನಿಗೆ ಬೆಟ್ಟಿಂಗ್, ಫಿಕ್ಸಿಂಗ್ ಭೂತ ಕುಣಿಯತೊಡಗಿತ್ತು. ಈ ಭೂತವನ್ನು ಕುಣಿಸುತ್ತಿರುವುದು 'ಡಿ' ಕಂಪನಿ ಎಂಬ ಅನುಮಾನ ಈ ಹಿಂದೆ ಕೂಡಾ ಇತ್ತು ಆದರೆ, ಪೊಲೀಸರು ಸ್ಪಷ್ಟಪಡಿಸಿರಲಿಲ್ಲ. ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ನಂತರ ದೆಹಲಿ ಪೊಲೀಸರು ನೇರವಾಗಿ ದಾವೂದ್ ಇಬ್ರಾಹಿಂ ಹೆಸರೆತ್ತಿದ್ದಾರೆ.












Click it and Unblock the Notifications