ಯುಪಿಎಗೆ ನಾಲ್ಕು : ಬಿಜೆಪಿಯಿಂದ ಆರೋಪಗಳ ಉಡುಗೊರೆ

ಬುಧವಾರ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್, ಯುಪಿಎ ಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ. ಜನರಪರ ಆಡಳಿತ ನೀಡಲು ವಿಫಲವಾಗಿದೆ ಎಂದು ಯುಪಿಎ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಮ್ಮಿಶ್ರ ಸರ್ಕಾರ ನಿಯಂತ್ರಿಸಲು ವಿಶೇಷವಾದ ನಾಯಕತ್ವ ಗುಣವಿರುವ ನಾಯಕರು ಬೇಕು. ಆದರೆ, ಯುಪಿಎ ನಾಯಕ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಇದರಲ್ಲಿ ವಿಫಲಾರಾಗಿದ್ದಾರೆ. ದೇಶಕ್ಕೆ ಸಮರ್ಥ ನಾಯಕತ್ವ ನೀಡುವಲ್ಲಿ ಅವರು ಯಶಸ್ವಿಯಾಗಿಲ್ಲ ಎಂದು ಸುಷ್ಮಾ ದೂರಿದರು.
ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದರೂ ಅವರೊಂದು ಪಕ್ಷದ ಅಥವಾ ದೇಶದ ನಾಯಕರಾಗಿಲ್ಲ. ಯುಪಿಎ ಮಿತ್ರಪಕ್ಷಗಳು ತಮ್ಮ ಸಮಸ್ಯೆಯನ್ನು ಪ್ರಧಾನಿ ಬಳಿ ಚರ್ಚಿಸದೇ, ಸೋನಿಯಾ ಗಾಂಧಿ ಬಳಿ ಚರ್ಚಿಸುತ್ತಾತೆ. ಆದ್ದರಿಂದ ಪ್ರಧಾನಿ ಕೇವಲ ನೆಪಮಾತ್ರಕ್ಕೆ ಅಧಿಕಾರದಲ್ಲಿದ್ದಾರೆ ಎಂದು ಟೀಕಿಸಿದರು.
ಜನಪರ ಕಾಳಜಿಯನ್ನು ಯುಪಿಎ ಸರ್ಕಾರ ಮರೆತಿದೆ. ಜನ ವಿರೋಧಿಯಾದ ಹಲವು ನಿರ್ಧಾರಗಳನ್ನು ಸರ್ಕಾರ ಅನೇಕ ಬಾರಿ ತೆಗೆದುಕೊಂಡಿದೆ. ನಂತರ ಯುಪಿಎ ಅಧ್ಯಕ್ಷೆ ಪತ್ರ ಬರೆದು ಸರ್ಕಾರದ ನಿರ್ಧಾರಗಳನ್ನು ವಾಪಸ್ ತೆಗೆದುಕೊಂಡ ಘಟನೆಗಳು ನಡೆದಿವೆ. ಯುಪಿಎಗೆ ನಿಜವಾದ ನಾಯಕರು ಯಾರು ಎಂದು ಪ್ರಶ್ನಿಸಿದರು.
ಖಜಾನೆ ತುಂಬಿತ್ತು : ದೇಶದ ಖಜಾನೆ ತುಂಬಿಸಿ ಎನ್ಡಿಎ ಸರ್ಕಾರ ಯುಪಿಎಗೆ ಅಧಿಕಾರ ನೀಡಿತ್ತು. ಆದರೆ ಈಗ ದೇಶದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಭ್ರಷ್ಟಾಚಾರವೇ ಕಾರಣ ಎಂದು ಸುಷ್ಮಾ ಆರೋಪಿಸಿದರು.
ಯುಪಿಎ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ. ಸಾಮಾನ್ಯ ಜನರು ಬೆಲೆ ಏರಿಕೆಯಿಂದಾಗಿ ಆತಂಕಗೊಂಡಿದ್ದಾರೆ. ಯಾವ ಸರ್ಕಾರದ ಅವಧಿಯಲ್ಲೂ ಹಣದುಬ್ಬರ ಇಷ್ಟೊಂದು ಏರಿಕೆಯಾಗಿರಲಿಲ್ಲ. ಆರ್ಥಿಕ ತಜ್ಞರಾದ ಪ್ರಧಾನಿಯವರು ಹಣದುಬ್ಬರವನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ ಎಂದು ದೂರಿದರು.
ಯುಪಿಎ ಸರ್ಕಾರದ ನಾಲ್ಕು ವರ್ಷದ ಅವಧಿ ಪೂರ್ಣಗೊಳಿಸಿದ್ದು, ಸದ್ಯ ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಭ್ರಷ್ಟಾಚಾರದ ಕಳಂಕ ಹೊತ್ತ ಯುಪಿಎ ಸರ್ಕಾರ ಮುಂದಿನ ಚುನಾವಣೆಯಲ್ಲೂ ಅಧಿಕಾರ ಪಡೆಯುವುದೇ ಎಂಬುದು ಕುತೂಹಲ ಮೂಡಿಸಿದೆ. ತಕ್ಷಣ ಚುನಾವಣೆ ನಡೆದರೆ, ಯುಪಿಎ ಹಿನ್ನಡೆ ಅನುಭವಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. (ಯುಪಿಎಗೆ ಮತ್ತೊಂದು ಸೋಲು)












Click it and Unblock the Notifications