ಫೇಸ್ ಬುಕ್ ನಲ್ಲಿ ಅಂಬೇಡ್ಕರ್ ನಿಂದಿಸಿ ಜೈಲು ಸೇರಿದ

ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ತೃತೀಯ ಬಿಕಾಂ ವಿದ್ಯಾರ್ಥಿ ಮಂಜುನಾಥ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಏ.14 ರಂದು ಶುಭಾಶಯ ಪ್ರಕಟಿಸಿ, ಅಂಬೇಡ್ಕರ್ ಫೋಟೋ ಹಾಕಿದ್ದರು.
ಫೇಸ್ ಬುಕ್ ನಲ್ಲಿ ಮಂಜುನಾಥ್ ಸ್ನೇಹಿತರಾದ ಪ್ರದೀಪ್ ಏ.28ರಂದು, ಈ ಶುಭಾಶಯ ಸಂದೇಶಕ್ಕೆ ಅವಹೇಳನಕಾರಿ ಕಾಮೆಂಟ್ ಹಾಕಿದ್ದರು. ಅಂಬೇಡ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಲ್ಲದೇ ಮತೀಯ ಭಾವನೆಗೆ ಧಕ್ಕೆ ಬರುವಂತೆ ನಾಲ್ಕು ಸಂದೇಶ ಬರೆದಿದ್ದರು.
ಇದರಿಂದ ಕೆರಳಿದ ಮಂಜುನಾಥ್ ಬಾಗಲಕೋಟೆ ನಗರ ಠಾಣೆಗೆ ಪ್ರದೀಪ್ ವಿರುದ್ಧ ದೂರು ನೀಡಿದ್ದರು. ಪ್ರದೀಪ್ ಫೇಸ್ ಬುಕ್ ಫೋಟೋಗಳು ಮತ್ತು ವೈಯಕ್ತಿಕ ವಿವರಗಳ ಜೆರಾಕ್ಸ್ ಪ್ರತಿಯನ್ನು ದೂರಿನೊಂದಿಗೆ ನೀಡಿದ್ದರು. ಫೇಸ್ ಬುಕ್ ಖಾತೆಯ ವಿವರವನ್ನು ಸಂಗ್ರಹಿಸಿದ ಪೊಲೀಸರು ಪ್ರದೀಪ್ ಬೆಂಗಳೂರಿನವರೆಂದು ಕಂಡು ಹಿಡಿದರು.
ಅಂಬೇಡ್ಕರ್ ವಿರುದ್ಧ ಪ್ರದೀಪ್ ಹಾಕಿದ್ದ ಕಾಮೆಂಟ್ ನ ಪ್ರತಿಯನ್ನು ಪೊಲೀಸರಿಗೆ ದೂರಿನ ಜೊತೆಗೆ ನೀಡಲಾಗಿತ್ತು. ದೂರಿನ ತನಿಖೆ ಆರಂಭಿಸಿದ ಪೊಲೀಸರು ಬೆಂಗಳೂರಿಗೆ ತೆರಳಿ, ಪ್ರದೀಪ್ ನನ್ನು ಬಂಧಿಸಿ, ಬಾಗಲಕೋಟೆಗೆ ಬುಧವಾರ ಸಂಜೆ ಕರೆತಂದಿದ್ದಾರೆ.
ಬುಧವಾರ ಸಂಜೆ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್ ಹೇಳಿದ್ದಾರೆ.
ಕೇವಲ ನಾಲ್ಕು ದಿನಗಳ ಹಿಂದೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಕೆ.ರೋಸಯ್ಯ ವಿರುದ್ದ ಅವಹೇಳನಕಾರಿ ಕಾಮೆಂಟ್ ಹಾಕಿ, ಹೈದರಾಬಾದ್ ಮೂಲದ ವಕೀಲೆಯೊಬ್ಬರು ಜೈಲು ಸೇರಿದ್ದರು. ಸದ್ಯ ಬೆಂಗಳೂರಿನಗ ಯುವಕನೊಬ್ಬ ಜೈಲು ಸೇರಿದ್ದಾನೆ. (ಮಾಜಿ ಸಿಎಂ ಮೇಲೆ ಕಾಮೆಂಟಿಗೆ ವಕೀಲೆ ಬಂಧನ)












Click it and Unblock the Notifications