ಯಾರು ಮುಖ್ಯಮಂತ್ರಿ? ನಿಜವಾದ ಓದುಗರ ಅಂದಾಜು

***
ಕಳೆದ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪಕ್ಷೇತರರ ಸಹಾಯದೊಂದಿಗೆ ಬಹುಮತ ಗಳಿಸಿದಾಗ ಅವರಿಗೆ ಮುಖ್ಯಮಂತ್ರಿ ಯಾರಾಗಬೇಕೆಂಬ ಗೊಂದಲವಿರಲಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತ ದೊರೆತರೂ ಮುಖ್ಯಮಂತ್ರಿ ಯಾರನ್ನು ಮಾಡಬೇಕೆಂಬ ಗೊಂದಲದಲ್ಲಿ ತಾನೇ ಗೂಡುಕಟ್ಟಿಕೊಂಡಿದೆ.
ಸದ್ಯಕ್ಕೆ ವಿಧಾನಸಭೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗಿರುವ, ವಲಸೆಗಾರ ಸಿದ್ದರಾಮಯ್ಯ ಅವರು ಪ್ರಬಲ ಅಭ್ಯರ್ಥಿಯಾಗಿದ್ದರೆ, ವಿಧಾನಸಭೆಯಲ್ಲಿ ಸ್ಪರ್ಧಿಸದಿದ್ದರೂ ಮೂಲ ಕಾಂಗ್ರೆಸ್ಸಿಗನಾಗಿರುವ ಹಿರಿಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಎರಡನೇ ಅಭ್ಯರ್ಥಿಯಾಗಿದ್ದಾರೆ. ಈ ನಡುವೆ, ಸ್ಪರ್ಧಿಸಿ ಸೋತ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ನಾನ್ಯಾರಿಗೆ ಕಮ್ಮಿ ಎಂದು ತೊಡೆ ತಟ್ಟಿದ್ದಾರೆ.
ಇಂಥ ವಿಪರೀತ ಪರಿಸ್ಥಿತಿ ಕಾಂಗ್ರೆಸ್ಸಿಗೆ ಹಿಂದೆ ಯಾವತ್ತೂ ಉದ್ಭವವಾಗಿರಲಿಲ್ಲ. ಎಸ್ಎಂ ಕೃಷ್ಣ, ಧರಂಸಿಂಗ್ ಮುಖ್ಯಮಂತ್ರಿಯಾದಾಗ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಪ್ರಶ್ನಿಸುತ್ತಿದ್ದವರು ಮತ್ತು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದವರು, ಬ್ಲಾಕ್ಮೇಲ್ ಮಾಡುತ್ತಿದ್ದವರು ಯಾರೂ ಇರಲಿಲ್ಲ. ಇದ್ದರೂ ಬಹಿರಂಗವಾಗಿ ಬಾಯಿ ಬಿಡುತ್ತಿರಲಿಲ್ಲ. ಅಂಥದೊಂದು ಸಂಪ್ರದಾಯವನ್ನು ಸಿದ್ದರಾಮಯ್ಯ ಮುರಿದಿದ್ದಾರೆ.
ಚುನಾವಣೆಗಿಂತಲೂ ಮುಂಚೆ ಮುಂದಿನ ಸರಕಾರ ರಚಿಸುವ ವಾಸನೆ ಬಡಿಸಿಕೊಂಡಿದ್ದ ಸಿದ್ದರಾಮಯ್ಯ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೋದಲ್ಲೆಲ್ಲ ಘಂಟಾಘೋಷವಾಗಿ ಸಾರುತ್ತಿದ್ದರು ಮತ್ತು ಎಐಸಿಸಿ ಅಣತಿಗೆ ಕ್ಯಾರೆ ಅನ್ನುತ್ತಿರಲಿಲ್ಲ. ಅಂಥವರು ಈಗ ಚುನಾವಣೆಯಲ್ಲಿ ಗೆದ್ದಿದ್ದಲ್ಲದೆ, ತನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ನೇರವಾಗಿ ಹೈಕಮಾಂಡನ್ನು ಕೇಳುತ್ತಿದ್ದಾರೆ. ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?

ನಮ್ಮ ಪ್ರಶ್ನೆಗೆ ಓದುಗರ ಉತ್ತರ
ಮುಖ್ಯಮಂತ್ರಿ ಯಾರು ಆಗ್ತಾರೆ? ಸಿದ್ದುನೋ, ಖರ್ಗೆನೋ ಅಥವಾ ಮತ್ಯಾರೋ? ಎಂಬ ಪ್ರಶ್ನೆಯನ್ನು ಓದುಗರ ಮುಂದಿಟ್ಟಿದ್ದೆವು. ಒನ್ಇಂಡಿಯಾ ಕನ್ನಡ ಪೋಲ್ನಲ್ಲಿ, ಟ್ವಿಟ್ಟರಿನಲ್ಲಿ ಮತ್ತು ಫೇಸ್ ಬುಕ್ ಪುಟದಲ್ಲಿ ಕೇಳಿತ್ತು. ಈ ಮೂರು ವೇದಿಕೆಯಲ್ಲಿ ಓದುಗರು ನಾನಾ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

ಮತಪೆಟ್ಟಿಗೆಯಲ್ಲಿ ಸಿದ್ದು ಪರ ಹೆಚ್ಚು ಮತ
ಪೋಲ್ನಲ್ಲಿ : ಇದರಲ್ಲಿ ಮೇ 10ರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ 3,200ಕ್ಕೂ ಹೆಚ್ಚು ಮತಗಳು ಬಿದ್ದಿದ್ದು, ಶೇ. 60ರಷ್ಟು ಜನ ವರುಣಾ ಕ್ಷೇತ್ರದಿಂದ ಗೆದ್ದಿರುವ ಸಿದ್ದರಾಮಯ್ಯ ಪರವಾಗಿ ಇದ್ದಾರೆ. ಶೇ. 17ರಷ್ಟು ಮಾತ್ರ ಖರ್ಗೆ ಸಿಎಂ ಆಗಲಿ ಎಂದಿದ್ದರೆ, ಶೇ. 23ರಷ್ಟು ಓದುಗರು ಮತ್ಯಾರೋ ಆಗುತ್ತಾರೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ. ಮತ್ಯಾರೋ ಅಂದ್ರೆ ಯಾರಾಗಬಹುದು? [ಮತಪೆಟ್ಟಿಗೆ]

ಅವರಿಬ್ಬರಿಗೂ ಫೇಸ್ ವ್ಯಾಲ್ಯೂ ಇಲ್ಲ!
ಫೇಸ್ ಬುಕ್ ಪುಟದಲ್ಲಿ : ಈ ಪ್ರಶ್ನೆಗೆ ಫೇಸ್ ಬುಕ್ ಫ್ಯಾನ್ ಪುಟದಲ್ಲಿ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. 235ಕ್ಕೂ ಹೆಚ್ಚು ಅಭಿಪ್ರಾಯಗಳು ಮಂಡನೆಯಾಗಿದ್ದು, ಹಲವರು ಸಿದ್ದರಾಮಯ್ಯ ಆದರೆ ಒಳ್ಳೆಯದು ಅಂದಿದ್ದರೆ, ಕೆಲವರು ಖರ್ಗೆ ಪರ ಮತ್ತು ಉಳಿದ ಅನೇಕರು, ಅವರಿಬ್ಬರಿಗೂ ಫೇಸ್ ವ್ಯಾಲ್ಯೂ ಇಲ್ಲ, ಇಬ್ಬರೂ ನಾಲಾಯಕ್, ಎಸ್.ಎಂ.ಕೃಷ್ಣರನ್ನು ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮೇಡಂ ಯಸ್ ಅಂದ್ರೆ ನಾನೇ ಆಗೋಕೂ ರೆಡಿ ಎಂದು ಓದುಗರೂ ಸಿದ್ಧರಾಗಿದ್ದಾರೆ. [ಫೇಸ್ ಬುಕ್ ಫ್ಯಾನ್ ಪೇಜ್]

ಟ್ವಿಟ್ಟರಲ್ಲಿ ಸಿದ್ದು ಪರ ಟುವ್ವಿ ಟುವ್ವಿ
ಟ್ವಿಟ್ಟರಿನಲ್ಲಿ : ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಕಬಳಿಸಿದ್ದರಿಂದ ಮಾನ್ಯ ಖರ್ಗೆ ಸಾಹೇಬರೇ ಮುಖ್ಯಮಂತ್ರಿ ಆಗಲಿ ಎಂದು ಟ್ವಿಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿ ಕೂಡ ಸಿದ್ದುವಿಗೇ ಹೆಚ್ಚಿನ ಮತಗಳು ಲಭಿಸಿದ್ದರಿಂದ, ಹೆಚ್ಚೂ ಕಡಿಮೆ ಸಿದ್ದರಾಮಯ್ಯ ಅವರೇ ಫೆವರಿಟ್ ಆಗಿದ್ದಾರೆ. ಕೆಲವರು ಮಿಸ್ಟರ್ ವದ್ರಾ ಆಗಲಿ ಅಥವಾ ವಾಟಾಳ್ ನಾಗರಾಜ್ ಆಗಲಿ ಎಂದು ಹೇಳಿ ಹಾಸ್ಯಪ್ರಜ್ಞೆ ಮೆರೆದಿದ್ದಾರೆ. [ಟ್ವಿಟ್ಟರ್]

ಇಂದು ಸಂಜೆಯ ಒಳಗೆ ಅಂತಿಮ ನಿರ್ಧಾರ
ಸಿದ್ದರಾಮಯ್ಯನೇ ಆಗಲಿ, ಮಲ್ಲಿಕಾರ್ಜುನ ಖರ್ಗೆಯೇ ಆಗಲಿ ಕಾಂಗ್ರೆಸ್ಸಿನಲ್ಲಿ ಅಂತಃಕಲಹಗಳು ಕಟ್ಟಿಟ್ಟಬುತ್ತಿ. ಸೋನಿಯಾ ಗಾಂಧಿ ಮನದಲ್ಲೇನಿದೆ ಬಲ್ಲವರಾರು? ಅವರೂ ಬೇಡ, ಇವರೂ ಬೇಡ ಅಂತ ಮತ್ತೆ ಎಸ್ಎಂ ಕೃಷ್ಣರನ್ನೇ ಪಟ್ಟದಲ್ಲಿ ಕೂಡಿಸಿಬಿಡುತ್ತಾರಾ? ಅವರಿಗೆ ಹೇಗಿದ್ದರೂ ವಯಸ್ಸಾಗಿದೆ ಅಂತ ಯುವ ನಾಯಕರಲ್ಲೊಬ್ಬರನ್ನು ಕೂಡಿಸಿಬಿಡಬಹುದಾ? ಯುವ ನಾಯಕರಲ್ಲಿ ರಾಜ್ಯ ಆಳಬಲ್ಲ ತಾಕತ್ತು ಯಾರಿಗಿದೆ? ಅಭಿಪ್ರಾಯ ಬೇಗನೆ ತಿಳಿಸಿ. ಯಾಕಂದ್ರೆ ಇಂದು ಸಂಜೆಯ ಒಳಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.












Click it and Unblock the Notifications