ಮಹಾಸಮರ : ಗುರುವಾರದ ಪ್ರಮುಖ ಸುದ್ದಿಗಳು

ಬಳ್ಳಾರಿಯ ಮಟ್ಕಾ ಮೋಹಿನ್ ವೆಂಕಟೇಶ್ ಎಂಬುವವರ ಮನೆ ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು ೧೪ ಲಕ್ಷ ರೂ. ನಗದು ಹಾಗೂ ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಪಕ್ಷವೊಂದರ ಜೊತೆ ಗುರುತಿಸಿಕೊಂಡಿದ್ದ ಈತ ಮತದಾರರಿಗೆ ಹಂಚಲು ಹಣ ಸಂಗ್ರಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೀರೆ, ವ್ಯಾನಿಟಿ ಬ್ಯಾಗ್ ವಶ : ಬೆಂಗಳೂರಿನ ಚಾಮರಾಜಪೇಟೆ ಪೊಲೀಸರು ಮೈಸೂರು ರಸ್ತೆಯಲ್ಲಿ ವಾಹನವೊಂದನ್ನು ತಪಾಸಣೆ ನಡೆಸಿದಾಗ 2 ಲಕ್ಷ ಮೌಲ್ಯದ ಸೀರೆ, ವ್ಯಾನಟಿ ವ್ಯಾಗ್ ಮತ್ತು ಸ್ಕೂಲ್ ಬ್ಯಾಗ್ ಗಳಿರುವುದು ಪತ್ತೆಯಾಗಿದೆ. ವಸ್ತುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ವಾಹನ ಚಾಲಕ ವೆಂಕಟೇಶ್ ಅವರನ್ನು ಬಂಧಿಸಿದ್ದಾರೆ.
ಪ್ರೀತಂ ನಂದೀಶ್ ಅಮಾನತು : ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಹಾಗೂ ಮಾಜಿ ಬಿಜೆಪಿ ಶಾಸಕ ಶಂಕರಲಿಂಗೇಗೌಡ ಪುತ್ರ ನಂದೀಶ್ ಪ್ರೀತಂ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಮೈಸೂರು ಜಿಲ್ಲಾ ಬಿಜೆಪಿ ಘಟಕ ಆದೇಶ ಹೊರಡಿಸಿದೆ. ಜೆಡಿಎಸ್ ಸೇರಿರುವ ಶಂಕರಲಿಂಗೇಗೌಡ ಪರ ಪ್ರೀತಂ ಚುನಾವಣಾ ಪ್ರಚಾರ ನಡೆಸುತ್ತಿದ್ದರು ಎಂದು ಅವರನ್ನು ಅಮಾನತು ಗೊಳಿಸಲಾಗಿದೆ.
ರೆಡ್ಡಿ ಬೆಂಗಲಿಗರು ವಶಕ್ಕೆ : ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ ಅವರ 30 ಬೆಂಬಲಿಗರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ಪರವಾಗಿ ಇವರು ಹಣ ಹಂಚುತ್ತಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. 30 ಮಂದಿಯನ್ನು ಬಂಧಿಸಿದ ಹರಪನಹಳ್ಳಿ ಪೊಲೀಸರು ಅವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ : ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯ ಶುಕ್ರವಾರ ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ. ನಂತರ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಬಹುದಾಗಿದೆ. ಮತದಾನಕ್ಕೆ 48 ಗಂಟೆಗಳು ಬಾಕಿ ಉಳಿದಿರುವಾಗ ಪ್ರಚಾರ ಕಾರ್ಯ ಮುಕ್ತಾಯವಾಗಲಿದೆ. ಸಾಮಾಜಿಕ ತಾಣಗಳ ಮೂಲಕವೂ ನಾಳೆ ಸಂಜೆಯಿಂದ ಪ್ರಚಾರ ನಡೆಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ.
14.4 ಕೋಟಿ ವಶ : ಅಕ್ರಮವಾಗಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 14.4 ಕೋಟಿ ರೂ.ಗಳನ್ನು ಇದುವರೆಗೂ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ 2250 ಪ್ರಕರಣಗಳು ದಾಖಲಾಗಿವೆ. 650 ಅಭ್ಯರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications