24 ಸಾವಿರ ಮರಗಳ ಮಾರಣಹೋಮಕ್ಕೆ ಸಿದ್ಧತೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೈಗೆತ್ತಿಕೊಂಡಿರುವ ಈ ಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ರಿಪೇರಿ, ರಸ್ತೆ ಸುಧಾರಣೆ ಕಾಮಗಾರಿ ಒಳಗೊಂಡಿದೆ. ಕುಂದಾಪುರದಿಂದ ಕಾರವಾರದವರೆಗಿನ ಸುಮಾರು 186 ಕಿ.ಮೀ ದೂರದ ಮರಗಳಿಗೆ ಭೀತಿ ಆವರಿಸಿದೆ. ಹಲವು ಕಡೆ ಚತುಷ್ಪಥ ಹಾಗೂ ಕೆಲವು ಕಡೆ ಷಟ್ಪಥ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಈ ಹೆದ್ದಾರಿ ಮಹಾರಾಷ್ಟ್ರದ ಪನ್ ವೆಲ್ ಹಾಗೂ ಕೇರಳದ ಎಡಪ್ಪಳ್ಳಿಗೆ ಸಂಪರ್ಕ ಒದಗಿಸಲಿದೆ.
NHAI ಯೋಜನೆ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ. ಜುಲೈ ತಿಂಗಳಿನಲ್ಲಿ ಮರಗಳ ಹನನ ಕಾರ್ಯಕ್ಕೆ ಕೈ ಹಾಕಲಾಗುತ್ತೆ. ಸುಮಾರು 60ಕ್ಕೂ ಹೆಚ್ಚು ಜನ ವಸತಿ ಪ್ರದೇಶಗಳು, 3 ಕೈಗಾರಿಕಾ ಪ್ರದೇಶಗಳು, ಎರಡು ಸೀ ಬರ್ಡ್ ನೌಕಾನೆಲೆ, ಕಾರವಾರ ಬಂದರು ಎಲ್ಲವೂ ಈ ಯೋಜನೆಗೆ ಆಹುತಿಯಾಗುವ ಭೀತಿಯಲ್ಲಿದೆ.
ಈ ಹೆದ್ದಾರಿಯಲ್ಲಿರುವ ಶೇ 40ಕ್ಕೂ ಅಧಿಕ ಮರಗಳು ನೂರು ವರ್ಷಕ್ಕೂ ಹಳೆಯದಾಗಿದೆ. ರೋಸ್ ವುಡ್, ತೇಗ, ಹಲಸು, ಬೇವು ಸೇರಿದಂತೆ ಅನೇಕ ಮರಗಳು ನಾಶಗೊಳ್ಳಲಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದ ಜೀವ ವೈವಿಧ್ಯತೆಗೆ ಹಾನಿಯಾಗಲಿದೆ. ಜೀವಜಲ ಬತ್ತಿಹೋಗಲಿದೆ. ಹವಾಮಾನದ ಮೇಲೆ ಭೀಕರ ಪರಿಣಾಮ ಬೀರಲಿದೆ ಎಂದು ಕುಂದಾಪುರದ ಪರಿಸರವಾದಿ ಅಶೋಕ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಚಿಪ್ಕೋ(ಅಪ್ಪಿಕೋ) ಚಳವಳಿಯನ್ನು ಕಂಡಿದೆ. ಈ ಯೋಜನೆಗೂ ಜನರಿಂದ ಭಾರಿ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಏ.2ರಂದು ಎರಡನೇ ಬಾರಿ ಜಿಲ್ಲಾಧಿಕಾರಿಗಳು ಜನಾಭಿಪ್ರಾಯ ಸಂಗ್ರಹ ಸಭೆ ಕರೆದಿದ್ದಾರೆ.
ಉತ್ತಮ ತೀರ್ಪು: ಈ ಹಿಂದೆ ಇನ್ನೊಂದು ಪ್ರಕರಣದಲ್ಲಿ ಸುಮಾರು 223 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ 218 ರಸ್ತೆ ಅಗಲೀಕರಣ ಕಾರ್ಯದಿಂದ ಸುಮಾರು 35000 ಮರಗಳು ನೆಲಕ್ಕುರಳಲಿದೆ ಎಂಬ ಆತಂಕಕಾರಿ ಸುದ್ದಿ ವರದಿಯಾಗಿತ್ತು. ಬಿಜಾಪುರ, ಗುಲ್ಬರ್ಗಾ ಹಾಗೂ ಹುಮನಾಬಾದ್ ಪ್ರದೇಶಕ್ಕೆ ಇದು ಮಾರಕವಾಗಿದ್ದ ಈ ಕಾಮಗಾರಿಗೆ ಹೈಕೋರ್ಟ್ ತಡೆ ಒಡ್ಡಿತ್ತು.
ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿ.ಜೆ.ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ, NHAI ಉದ್ದೇಶಕ್ಕೆ ಅಡ್ಡಪಡಿಸಿತ್ತು.












Click it and Unblock the Notifications