ಬಿಜೆಪಿ ರಾಜ್ಯಾಧ್ಯಕ್ಷರಾಗಿ ಈಶ್ವರಪ್ಪ ಪುನರಾಯ್ಕೆ?

ಕೇಂದ್ರ ಬಿಜೆಪಿ ನಾಯಕರಿಗೂ ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸುವುದು ಸವಾಲಾಗಿತ್ತು. ರಾಜ್ಯ ನಾಯಕರಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಂತೆ ಒಮ್ಮತ ಮೂಡದ ಕಾರಣ ಈಶ್ವರಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ಮತ್ತೊಮ್ಮೆ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಶ್ವರಪ್ಪ ಅವರಿಗೂ ಈ ಕುರಿತು ಸಂದೇಶ ರವಾನಿಸಿರುವ ವರಿಷ್ಟರು, ಉಪ ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನದಲ್ಲಿ ರಾಜ್ಯಾಧ್ಯಕ್ಷರಾಗಿ ಈಶ್ವರಪ್ಪ ಅವರನ್ನು ಪುನರಾಯ್ಕೆ ಮಾಡಿರುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಘೋಷಿಸುವ ಸಂಭವವಿದೆ.
ಈ ಮಾತನ್ನು ಧೃಡ ಪಡಿಸುಂವತೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಶ್ವರಪ್ಪ ನೀಡಿದ್ದ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಚುನಾವಣೆ ಎದುರಾಗುತ್ತಿರುವಾಗ ಹೊಸಬರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿದೆ, ಪಕ್ಷ ಸಂಘಟನೆ ಬಗ್ಗೆ ತಿಳಿದಿರುವ ಈಶ್ವರಪ್ಪ ಅವರನ್ನು ನೇಮಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಹೈ ಕಮಾಂಡ್ ನಾಯಕರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಸದಾನಂದಗೌಡರು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಹೇಳಿಕೆ ನೀಡುತ್ತಿರುವುದರಿಂದ, ಅವರಿಗೆ ಪುನಃ ರಾಜ್ಯ ರಾಜಕೀಯದ ಉಸ್ತುವಾರಿ ವಹಿಸಲು ವರಿಷ್ಠರು ಸಿದ್ಧರಿಲ್ಲ ಎಂದು ವಿಶ್ಲೇಷಿಸಲಾಗಿದೆ. ಪಕ್ಷದ ಸಂಘಟನೆ ಬಗ್ಗೆ ಚೆನ್ನಾಗಿ ತಿಳಿದಿರುವ ಈಶ್ವರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ವರಿಷ್ಟರದ್ದಾಗಿದೆ.
ಎರಡು ದಿನದಲ್ಲಿ ರಾಜ್ಯಾಧ್ಯಕ್ಷರ ಘೋಷಣೆಯಾಗಲಿದೆ ಎಂದು ಈಗಾಗಲೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಯಡಿಯೂರಪ್ಪ ಹೊರತಾಗಿ ಸಮರ್ಥವಾಗಿ ಚುನಾವಣೆ ಎದುರಿಸುವುದು ಈಶ್ವರಪ್ಪ ಅವರಿಂದ ಮಾತ್ರ ಸಾಧ್ಯ ಎಂಬ ಧೃಡ ವಿಶ್ವಾಸ ಹೈ ಕಮಾಂಡ್ ನಾಯಕರದ್ದಾಗಿದೆ. ಆದ್ದರಿಂದ ಈಶ್ವರಪ್ಪ ಅವರನ್ನು ಪುನರಾಯ್ಕೆ ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ಈಗಾಗಲೇ ವಿಧಾನಸಭೆ ಚುನಾವಣೆ ಸಿದ್ದತೆಯಲ್ಲಿ ತೊಡಗಿರುವ ಬಿಜೆಪಿ ಹೆಚ್ಚುದಿನ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಬಿಟ್ಟರೆ, ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬ ಉಂಟಾಗುವುದರಿಂದ ಚುನಾವಣೆ ಮುಗಿಯುವ ವರೆಗೆ ಈಶ್ವರಪ್ಪ ಅವರನ್ನು ಮುಂದುವರೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications