ಲೆಟ್ಸ್ ಡು ಇಟ್ ಮೈಸೂರು ಅಭಿಯಾನ ಯಶಸ್ವಿ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಮತ್ತು ಜಿಲ್ಲಾಧಿಕಾರಿ ರಾಮೇಗೌಡ, ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹಾಗೂ ಹಲವಾರು ಸಂಘಟನೆಗಳು ಒಟ್ಟಾಗಿ ಲೆಟ್ಸ್ ಡು ಇಟ್ ಮೈಸೂರು ಅಭಿಯಾನದ ಯಶಸ್ಸಿಗೆ ಸಹಕರಿಸಿದರು.
ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾದ ಸ್ಪಚ್ಛತಾ ಕಾರ್ಯದಲ್ಲಿ ಸುಮಾರು 31,890 ಸ್ವಯಂ ಸೇವಕರು ಭಾಗವಹಿಸಿ ನಗರದ ಕಸವನ್ನು ಸ್ವಚ್ಛಗೊಳಸಿ ಮೈಸೂರು ನಗರವನ್ನು ಸುಂದರಗೊಳಿಸಿದರು. ಭಾನುವಾರದ ರಜೆಯನ್ನು ಲೆಕ್ಕಿಸದೆ ಯುವಕ-ಯುವತಿಯರು ಪೊರಕೆ ಹಿಡಿದು ನಗರದ ಕಸ ಸ್ವಚ್ಛಗೊಳಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡ್ ಗಳಲ್ಲಿ ಲೆಟ್ಸ್ ಡು ಇಟ್ ಮೈಸೂರು ಅಭಿಯಾನ ಪೂರ್ಣಗೊಂಡಾಗ 19,748 ಬ್ಯಾಗ್ ಗಳಷ್ಟು ಕಸ ಸಂಗ್ರಹಣೆಯಾಗಿತ್ತು. ಇದು ಸುಮಾರು 200 ಲೋಡ್ ಗಳಾಗಿತ್ತು. ಬೆಳಗ್ಗೆ 6.45ಕ್ಕೆ ಪ್ರಾರಂಭವಾದ ಈ ಅಭಿಯಾನ ಸುಮಾರು ನಾಲ್ಕುಗಂಟೆಗಳ ಅವಧಿಯಲ್ಲಿ ಪೂರ್ಣಗೊಂಡಿತು.
ನಗರದ ಪ್ರತಿ ವಾರ್ಡ್ ನ ಕ್ಷಣಕ್ಷಣದ ಮಾಹಿತಿ ತಿಳಿಸಲು 2 ಸಹಾಯವಾಣಿಗಳನ್ನು ಪ್ರಾರಂಭಿಸಲಾಗಿತ್ತು. 18,730 ಪುರುಷರು ಹಾಗೂ 12,160 ಮಹಿಳೆಯರು ಈ ಅಭಿಯಾನದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದರು. 82 ಕಂಪನಿಗಳು, 30 ಸಂಘಟನೆಗಳು, 37 ಶಾಲಾ ಕಾಲೇಜುಗಳು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದವು.
ಮೈಸೂರು ಲಾರಿ ಮಾಲೀಕರ ಸಂಘ ಅಭಿಯಾನಕ್ಕೆ ಬೆಂಬಲ ನೀಡಿ 60 ಲಾರಿ ಮತ್ತು ಟ್ರಾಕ್ಟರ್ ಗಳನ್ನು ಒದಗಿಸಿತ್ತು. 191 ಬಾರಿ ಸಂಚಾರ ನಡೆಸಿದ ಲಾರಿಗಳು, ವಿದ್ಯಾರಣ್ಯಪುರದ ಕಸ ಸಂಸ್ಕರಣ ಘಟಕಕ್ಕೆ ಸ್ವಯಂ ಸೇವಕರು ಸಂಗ್ರಹಿಸಿದ ಕಸವನ್ನು ಸುರಿದು ಬಂದವು.
ನಮ್ಮ ಮೆನೆಯ ಕಸವನ್ನು ರಸ್ತೆಗೆ ಸುರಿದು ತಣ್ಣಗೆ ಕುಳಿತು ಕೊಳ್ಳುವ ಇಂದಿನ ಕಾಲದಲ್ಲಿ ಇಂತಹ ಸ್ವಯಂ ಪ್ರೇರಿತ ಅಭಿಯಾನ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ. ರಾಜ್ಯದ ಉಳಿದ ನಗರದ ನಾಗರೀಕರಿಗೂ ಈ ಅಭಿಯಾನ ಸ್ಫೂರ್ತಿ ನೀಡಲಿ, ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications