ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ ಸೋಲಿಸ್ತೇನೆ : ಬಿಎಸ್ವೈ
ಬೆಂಗಳೂರು,ಮಾ.12: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಅಂಗಲಾಚಿ ಬೇಡಿಕೊಂಡರೂ ನಾನು ಮತ್ತೆ ಬಿಜೆಪಿ ಕಡೆ ವಾಲುವುದಿಲ್ಲ. ಬಿಜೆಪಿ ಜೊತೆ ಯಾವುದೆ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ಕಾರ್ಯಕರ್ತರು ಮುಖಂಡರು ಗೊಂದಲ ಇಟ್ಟುಕೊಳ್ಳುವುದು ಬೇಡ. ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ ನೆಲಕಚ್ಚುವಂತೆ ಮಾಡುವುದು ನನ್ನ ಪರಮ ಗುರಿ ಎಂದು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಗುಡುಗಿದ್ದಾರೆ.
ನಮ್ಮ ದೃಷ್ಟಿ ಈಗ ವಿಧಾನಸೌಧದ ಕಡೆಗೆ. ಬಿಜೆಪಿ ಜೊತೆ ಕೈ ಜೋಡಿಸುವ ಬಗ್ಗೆ ಯಾರು ಸುಳ್ಳು ಸುದ್ದಿ ಹಬ್ಬಿಸಬೇಡಿ. ಅಂಥ ಸುದ್ದಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾವೊಬ್ಬ ಬಿಜೆಪಿ ನಾಯಕರು ನನ್ನ ಸಂಪರ್ಕದಲ್ಲಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನನ್ನ ಮೊದಲ ಗುರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ನೀಡುವುದಾಗಿತ್ತು. ಅದು ಈಡೇರಿದೆ. ಈಗ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ ಎಂದು ರಣೋತ್ಸಾಹದಲ್ಲಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕುತಂತ್ರ ಮಾಡಿ ನನ್ನನ್ನು ಬಿಜೆಪಿಯಿಂದ ಹೊರ ಹಾಕಿದರು. ಈಗ ಅದರ ಫಲವನ್ನು ಅನುಭವಿಸುತ್ತಿದ್ದಾರೆ. ಬಿಜೆಪಿ ಪ್ರಾಬಲ್ಯವಿರುವ ದಕ್ಷಿಣ ಕನ್ನಡ, ಕರಾವಳಿ ಜಿಲ್ಲೆಗಳಲ್ಲೇ ಬಿಜೆಪಿ ಕಳಪೆ ಸಾಧನೆ ಮಾಡಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ.
ನಾನೇ ಕಟ್ಟಿ ಬೆಳೆಸಿದ ಜನಸಂಘ ಮತ್ತು ಬಿಜೆಪಿ ಇಲ್ಲಿ ಗುರುತಿಸಿಕೊಳ್ಳಲು ಸುಮಾರು 10-15 ವರ್ಷಗಳ ಕಾಲ ತೆಗೆದುಕೊಂಡಿತು. ಆದರೆ, ಕೆಜೆಪಿ ಕೇವಲ ಮೂರೇ ತಿಂಗಳಿನಲ್ಲಿ ಮಾಡಿರುವ ಸಾಧನೆ ಗಮನಾರ್ಹ. ಇದಕ್ಕಾಗಿ ನಾನು ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದರು. ಯಡಿಯೂರಪ್ಪ ಸುದ್ದಿಗೋಷ್ಠಿ ಹೈಲೈಟ್ಸ್ ಮುಂದೆ ಓದಿ...
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಜಗದೀಶ್ ಶೆಟ್ಟರ್ ರಾಜೀನಾಮೆ
ನಾನು ಸಿಎಂ ಸ್ಥಾನದಲ್ಲಿ ಇದ್ದಿದ್ದರೆ ರಾಜ್ಯದ ಜನತೆಯ ಕ್ಷಮಾಪಣೆ ಕೇಳಿ ಅಧಿಕಾರದಲ್ಲಿ ಒಂದೂ ಕ್ಷಣವೂ ಮುಂದುವರೆಯದೆ ನಿರ್ಗಮಿಸುತ್ತಿದ್ದೆ. ಹೀನಾಯ ಸೋಲು ಕಂಡಿರುವ ಬಿಜೆಪಿ ನಾಯಕರು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು. ಸೂಚನೆ: ಸಾಂದರ್ಭಿಕ ಹಳೆ ಚಿತ್ರ ಬಳಸಲಾಗಿದೆ.

ಬೇಸರ
ಕಳೆದ 20 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದ ಉಡುಪಿ ಮತ್ತು ಪುತ್ತೂರು ಕ್ಷೇತ್ರಗಳಲ್ಲಿ ಅಧಿಕಾರ ಕಳೆದುಕೊಂಡಿರುವುದು ವೈಯಕ್ತಿಕವಾಗಿ ನನಗೆ ಭಾರೀ ಬೇಸರ ತಂದಿದೆ.
ನಾವು ಅಧಿಕಾರಕ್ಕೆ ಬರಲು ಕಳೆದ 40 ವರ್ಷಗಳಿಂದ ಹೋರಾಟ ನಡೆಸಿದ್ದೆವು. 15 ವರ್ಷಗಳಲ್ಲಿ ಸಾಕಷ್ಟು ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬಂದಿತ್ತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಮ್ಮ ತವರು ಕ್ಷೇತ್ರದಲ್ಲೇ ದಯಾನೀಯ ಸ್ಥಿತಿ ತಲುಪಿರುವುದು ಶೋಚನೀಯ.ಸೂಚನೆ: ಸಾಂದರ್ಭಿಕವಾಗಿ ಹಳೆ ಚಿತ್ರ ಬಳಸಲಾಗಿದೆ.

ಭ್ರಷ್ಟಾಚಾರ ಬಗ್ಗೆ ಬಿಎಸ್ ವೈ
ಬಿಜೆಪಿ ಮತ್ತು ಜೆಡಿಎಸ್ 2007ರ ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳಿಂತಲೂ ಕಡಿಮೆ ಸ್ಥಾನ ಗಳಿಸಿದೆ. ಕಾಂಗ್ರೆಸ್ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿದೆ. ಮತದಾರರು ಜಾಗ್ರತೆಯಿಂದ ತಮ್ಮ ಹಕ್ಕು ಚಲಾಯಿಸಿರುವುದು ಇದರಿಂದ ಸಾಬೀತಾಗಿದೆ
ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸಚಿವರು ಮತ್ತು ಶಾಸಕರ ಭ್ರಷ್ಟಾಚಾರಗಳು ಹೊರಬರುತ್ತಿರುವುದೇ ಸಾಧನೆಯಾಗಿದೆ. ಬಜೆಟ್ ಬಗ್ಗೆ ಮುಖ್ಯಮಂತ್ರಿಗಳು ಅಂಕಿಅಂಶ ನೀಡುತ್ತಿಲ್ಲ. ವಿಧಾನಸೌಧ ಖಾಲಿಯಾಗಿದ್ದು ಬಿಜೆಪಿ ಸಾಧನೆ ಶೂನ್ಯ
ಮತ್ತೆ ಪ್ರವಾಸಕ್ಕೆ ಸಜ್ಜು
ಹೈದರಾಬಾದ್ ಕರ್ನಾಟಕದಲ್ಲಿ ಪಕ್ಷಕ್ಕೆ ಮತದಾರರು ನಿರೀಕ್ಷೆಗೂ ಮೀರಿದ ಹೆಚ್ಚಿನ ಬೆಂಬಲ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪಕ್ಷ ಸಂಘಟಿಸಲು ಇದು ವರದಾನವಾಗಿದ್ದು ಮುಂದಿನ ದಿನಗಳಲ್ಲಿ ಆತ್ಮಸ್ಥೈರ್ಯದಿಂದ ಪ್ರವಾಸ ಮಾಡುತ್ತೇನೆ

ಅಸೆಂಬ್ಲಿಯತ್ತ ಗುರಿ
ರಾಜ್ಯ 224 ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧಿಸಲಿದೆ. ಬುಧವಾರ(ಮಾ.13) ಪ್ರವಾಸ ಆರಂಭವಾಗಲಿದ್ದು 'ವಿಧಾನಸೌಧದ ಕಡೆಗೆ ನಮ್ಮ ನಡಿಗೆ' ಎಂಬ ಘೋಷಣೆಯೊಂದಿಗೆ ಪ್ರವಾಸ ನಡೆಸಲಿದ್ದೇನೆ. ಬಿಜೆಪಿ ಸರ್ಕಾರವನ್ನು ಜನರೇ ತಿರಸ್ಕರಿಸಲಿದ್ದಾರೆ. ನಾವು ಜನರ ಅಸ್ತ್ರವಾಗಿದ್ದೆವೆ ಅಷ್ಟೇ ಎಂದರು.












Click it and Unblock the Notifications