ಜನ ಬೆಂಬಲ ಇದ್ರೆ ನಾನೇ ಮುಂದಿನ ಸಿಎಂ

ರಾಜ್ಯದಲ್ಲಿ ಪುನಃ ಮುಖ್ಯಮಂತ್ರಿಯಾಗಿ ಕರ್ನಾಟಕವನ್ನು ಕಲ್ಯಾಣರಾಜ್ಯ ಮಾಡುತ್ತೇನೆಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಪಥ ಮಾಡಿದ್ದಾರೆ. ತಮ್ಮ 71ನೇ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೂರೂವರೆ ವರ್ಷ ಮುಖ್ಯಮಂತ್ರಿಯಾಗಿ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದೇನೆಂಬ ತೃಪ್ತಿಯಿದೆ. ಈ ಬಾರಿ ಜನತೆ ಪುನಃ ತಮಗೆ ಆಶೀರ್ವಾದ ನೀಡಿದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ. ಮತದಾರರು ಕೂಡ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿದಾಗ ನನಗೆ ಯಾವುದೇ ಸ್ಪಷ್ಟ ಗೊತ್ತುಗುರಿ ಇರಲಿಲ್ಲ. ಇದೀಗ ಸ್ಪಷ್ಟ ಗುರಿ ಇರುವುದರಿಂದ ಜನತೆಯ ಬೆಂಬಲವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯೇ ಇದಕ್ಕೆ ವೇದಿಕೆಯಾಗಲಿದೆ ಎಂದು ಹೇಳಿದರು.
ಕೆಜೆಪಿ ಕಟ್ಟಿದಾಗ ನನ್ನ ಹಿಂದೆ ಯಾರು ಇರಲಿಲ್ಲ. ಇದ್ದವರು ಬೆರಳೆಣಿಕೆಯಷ್ಟು ಬೆಂಬಲಿಗರು ಮಾತ್ರ. ಇದೀಗ ಎಲ್ಲೆಡೆ ಜನರಿಂದ ಪಕ್ಷಕ್ಕೆ ಬೆಂಬಲ ಹೆಚ್ಚುತ್ತಿರುವುದರಿಂದ ನನ್ನ ಆತಂಕವೂ ದೂರವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಯಾರನ್ನೂ ಕೂಡ ಪಕ್ಷಕ್ಕೆ ಬರುವಂತೆ ಬಲವಂತವಾಗಿ ಒತ್ತಡ ಹೇರಿಲ್ಲ. ಪಕ್ಷದ ಸಿದ್ಧಾಂತ ತತ್ವ ಒಪ್ಪಿ ಬರುವವರಿಗೆ ಸ್ವಾಗತ ಇದೆ. ಕೆಜೆಪಿಗೆ ಬರುವವರನ್ನು ನೀವು ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಮಾಡು ಇಲ್ಲವೇ ಮಡಿ ಎಂಬ ನಿರ್ಣಯದ ಮೇಲೆ ಚುನಾವಣೆಯನ್ನು ಎದುರಿಸಲಿದೆ. ಯಾವುದೇ ಸಂದರ್ಭದಲ್ಲೂ ಚುನಾವಣೆ ಬಂದರೆ ಎದುರಿಸಲು ನಾವು ಕೂಡ ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ, ಬಿ.ಪಿ.ಹರೀಶ್ ಸೇರಿದಂತೆ ಕುಟುಂಬದ ಸದಸ್ಯರು ಮತ್ತಿತರರು ಹಾಜರಿದ್ದರು.












Click it and Unblock the Notifications