ಈಶ್ವರಪ್ಪಗೆ ಚುನಾವಣೆ ಭವಿಷ್ಯ ನುಡಿದ ಹರತಾಳು ಹಾಲಪ್ಪ

ಹಾಗಾದರೆ ಗೆಲುವು ಯಾರಿಗಪ್ಪಾ ಅಂತ ಕೇಳಿದರೆ 'ಕಳೆದ ನಾಲ್ಕೂವರೆ ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಯೋಜನೆಗಳೇ ನಮಗೆ ಶ್ರೀರಕ್ಷೆ. ತತ್ಫಲವಾಗಿ ಕೆಜೆಪಿ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲ್ಲಲಿದ್ದಾರೆ' ಎಂದು ಮಾಜಿ ಬಿಜೆಪಿ ಪ್ರತಿನಿಧಿ ಹಾಲಪ್ಪ ಹೇಳಿದ್ದಾರೆ.
ನಿನ್ನೆ ಸೊರಬ ಪಟ್ಟಣದ ಕೆಜೆಪಿ ಕಚೇರಿ ಆವರಣದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. 'ಕೆಜೆಪಿಯಿಂದಲೇ ಸೊರಬದಲ್ಲಿ ಕಣಕ್ಕಿಳಿಯುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ಕ್ಷೇತ್ರದಿಂದ ನಾನು ಪುನರಾಯ್ಕೆಯಾಗುವುದೂ ನಿಶ್ಚಿತ' ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರ ಮೂಲಕ 16 ಕೋಟಿ ರೂ. ಅನುದಾನವನ್ನು ತಂದು ಪಟ್ಟಣದ ಅಭಿವೃದ್ಧಿಗಾಗಿ ಅಭಿವೃದ್ಧಿಪಡಿಸಿದ್ದೇನೆ. ಕಳೆದ 40 ವರ್ಷಗಳಿಂದ ಯಾರೂ ಮಾಡದ ಅಭಿವೃದ್ಧಿಯನ್ನು ನಾಲ್ಕೇ ವರ್ಷದಲ್ಲಿ ಮಾಡಿ ತೋರಿಸಿದ್ದೇನೆ. ಇದಕ್ಕೆ ಕಾರಣ ಬಿಎಸ್ ಯಡಿಯೂರಪ್ಪ ಅವರು. ತಾಲೂಕಿನ ಬಗ್ಗೆ ಪರಿಚಯವೇ ಇಲ್ಲದನನ್ನನ್ನು ಅಧಿಕ ಮತಗಳಿಂದ ಗೆಲ್ಲಿಸಿದ ಜನತೆಗೆ ತಾವೆಂದೂ ದ್ರೋಹ ಬಗೆಯುವಿದಿಲ್ಲ' ಎಂದೂ ಅವರು ವಾಗ್ದಾನ ನೀಡಿದರು.
ಯಡಿಯೂರಪ್ಪನ್ನ ಮುಖ್ಯಮಂತ್ರಿ ಮಾಡುವುದೇ ಹಾಲಪ್ಪ ಗುರಿ:
ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ನಂತರ ಯಾವುದೇ ಅನುದಾನದ ಹಣವನ್ನು ಬಿಡುಗಡೆ ಮಾಡದೇ ತಾಲೂಕನ್ನು ನಿರ್ಲಕ್ಷಿಸುತ್ತಿದ್ದಾರೆ. ತಾವು ಯಡಿಯೂರಪ್ಪನವರ ಬೆಂಬಲಿಗ ಎನ್ನುವ ಏಕೈಕ ಕಾರಣಕ್ಕಾಗಿ ಜನೋಪಯೋಗಿ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ಕೆಎಸ್ ಈಶ್ವರಪ್ಪ ತಾವು ಸರ್ಕಾರ ಒಬ್ಬ ಪ್ರತಿನಿಧಿ ಎಂಬುದನ್ನೇ ಮರೆತು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅನುದಾನ ಬಿಡುಗಡೆಯಾಗದೇ ಇದ್ದ ಮೇಲೆ ಶಾಸಕನಾಗಿ ಮುಂದುವರೆಯಲು ಅರ್ಥವಿಲ್ಲ ಎಂದೇ ಭಾವಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ' ಎಂದು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕೋಮಾಸ್ಥಿತಿಯಲ್ಲಿರುವ ಬಿಜೆಪಿ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ. ಈಶ್ವರಪ್ಪ ಮುಂದಿನ ಚುನಾವಣೆಯಲ್ಲಿ ಸೋಲುವುದು ನಿಶ್ಚಿತ. ಬಿಜೆಪಿಯನ್ನು ನಿರ್ನಾಮ ಮಾಡಿ, ಕೆಜೆಪಿಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ತಮ್ಮ ಮುಂದಿನ ಗುರಿ ಎಂದರು.












Click it and Unblock the Notifications