ಹೈದರಾಬಾದ್ ಸ್ಫೋಟದ ನಂತರ ಹರಿದ್ವಾರ ಟಾರ್ಗೆಟ್
ಹರಿದ್ವಾರ, ಫೆ.27: ಕಳೆದ ಗುರುವಾರ ಹೈದರಾಬಾದಿನಲ್ಲಿ ಅವಳಿ ಸ್ಫೋಟ ನಡೆಸಿ, ಅಟ್ಟಹಾಸ ಮೆರೆದ ಉಗ್ರರು ಇದೀಗ ಹಿಂದೂಗಳ ಪವಿತ್ರ ಸ್ಥಳವಾದ ಹರಿದ್ವಾರದಲ್ಲೂ ಬಾಂಬ್ ಸ್ಫೋಟಕ್ಕೆ ಹೊಂಚುಹಾಕಿದ್ದಾರೆ ಎಂದು ತಿಳಿದುಬಂದಿದೆ.
ಹರಿದ್ವಾರ ಮತ್ತು ಡೆಹರಾಡೂನಿನಲ್ಲಿ ಹಲವು ಧಾರ್ಮಿಕ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಜೈಷೆ ಮೊಹಮದ್ ಉಗ್ರ ಸಂಘಟನೆ ಬೆದರಿಕೆ ಹಾಕಿದೆ ಎಂದು ತಿಳಿದುಬಂದಿದೆ.

JeM ಬರೆದಿದೆ ಎನ್ನಲಾದ ಈ ಪತ್ರದಲ್ಲಿ ಹರಿದ್ವಾರ, ಡೆಹರಾಡೂನ್, ನೈನಿತಾಲ್ ಕಥಗೋಡಂ ರೈಲ್ವೆ ಜಂಕ್ಷನ್ ಅಲ್ಲದೆ ಪ್ರಮುಖ ಧಾರ್ಮಿಕ ಮತ್ತು ಪ್ರವಾಸೀ ಸ್ಥಳಗಳನ್ನು ಬಾಂಬ್ ಸ್ಫೋಟದಿಂದ ಉಡಾಯಿಸಲು ಹೊಂಚುಹಾಕಲಾಗಿದೆ ಎಂದು ತಿಳಿದುಬಂದಿದೆ. ಹರಿದ್ವಾರದ ವಿಶೇಷ ಪೊಲೀಸ್ ಅಧಿಕಾರಿ ಅರುಣ್ ಮೋಹನ್ ಜೋಷಿ ಅವರು ಈ ವಿಷಯವನ್ನು ದೃಢಪಡಿಸಿದ್ದಾರೆ.
ಕರಾಚಿ ನೆಲೆಯ JeM ಕಮಾಂಡರ್ ಈ ಪತ್ರವನ್ನು ರವಾನಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ. JeM ಪತ್ರ ಬೆದರಿಕೆ ಹಿನ್ನೆಲೆಯಲ್ಲಿ ಉತ್ತರಾಕಾಂಡ ಮತ್ತು ಇತರೆ ಧಾರ್ಮಿಕ ಸ್ಥಳಗಳಲ್ಲಿ ಈಗ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ಫೆ. 21ರಂದು ಹೈದರಾಬಾದ್ ಅವಳಿ ಬಾಂಬ್ ಸ್ಫೋಟದಲ್ಲಿ 16 ಮಂದಿ ಮರಣವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇನ್ನು ಸಂಸತ್ ದಾಳಿಕೋರ ಅಫ್ಜಲ್ ಗುರುನನ್ನು ಫೆ. 9ರಂದು ದೆಹಲಿಯ ತಿಹಾರ್ ಜೈಲಿನಲ್ಲಿ ನೇಣಿಗೆ ಹಾಕಲಾಗಿತ್ತು.












Click it and Unblock the Notifications