ನಾಲ್ಕೇ ಮಹಾನಗರ ಪಾಲಿಕೆ ಸಾಕೆಂದ್ರು ಕುಮಾರಸ್ವಾಮಿ

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ವಿಧಾಸಸಭಾ ಚುನಾವಣೆಗೆ ಪಕ್ಷದ ಬಲ ಹೆಚ್ಚಿಸಿಕೊಳ್ಳಲಾಗುವುದು. ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಹಾಗೂ ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಜೆಡಿಎಸ್ ಅಧಿಕಾರ ಪಡೆಯುವುದು ಖಚಿತ ಎಂದರು.
ಜೆಡಿಎಸ್ ಗೆ 10 ಹೆಚ್ಚುವರಿ ಸ್ಥಾನ : ವಿಧಾನಸಭಾ ಚುನಾವಣೆಯಲ್ಲಿಯೂ ಜೆಡಿಎಸ್ ಕಳೆದ ಬಾರಿಗಿಂತ ಹೆಚ್ಚುವರಿಯಾಗಿ 10 ಸ್ಥಾನಗಳನ್ನು ಪಡೆಯಲಿದೆ. ಹಲವಾರು ಸಮೀಕ್ಷೆಗಳು ಜೆಡಿಎಸ್ ಗೆ ಹೆಚ್ಚು ಸ್ಥಾನ ದೊರೆಯುವುದಾಗಿ ಹೇಳುತ್ತಿವೆ. ಕಳೆದ ಬಾರಿ ಪಕ್ಷದಿಂದ 28 ಜನ ಶಾಸಕರಿದ್ದರು. ಈ ಬಾರಿ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಆಪರೇಷನ್ ಕಮಲದ ಮೂಲಕ ಪಕ್ಷ ತೊರೆದು ಮತ್ತೆ ಪಕ್ಷಕ್ಕೆ ಸೇರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ 185 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವುದಿಲ್ಲ. ಮುಖ್ಯಮಂತ್ರಿಗಳಿಗೆ ಜೊತೆ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸಲು ಸಲಹೆ ನೀಡಲು ಮಾತ್ರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭೇಟಿಮಾಡಿದ್ದಾರೆ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ರಾಜ್ಯದ 208 ಸ್ಥಳೀಯ ಸಂಸ್ಥೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತು ಪಡಿಸಿ ಏಳು ಮಹಾನಗರ ಪಾಲಿಕೆಗಳಲ್ಲಿ ಮಾ.7 ರಂದು ಚುನಾವಣೆ ನಡೆಯಲಿದೆ. ಆದರೆ, ಕುಮಾರಸ್ವಾಮಿ ನಾಲ್ಕು ಮಹಾನಗರ ಪಾಲಿಕೆಗಳಲ್ಲಿ ಮಾತ್ರ ಗೆಲವು ಸೀಮಿತ ಎಂದು ಏಕೆ ಹೇಳಿದರೋ ತಿಳಿಯುತ್ತಿಲ್ಲ. (ಚುನಾವಣಾ ವೇಳಾಪಟ್ಟಿ ನೋಡಿ)












Click it and Unblock the Notifications