ಚಿಕ್ಕಮಗಳೂರು ಗ್ಯಾಂಗ್ ರೇಪ್: 5 ಪೊಲೀಸರು ಸಸ್ಪೆಂಡ್

ಇತ್ತ ಗೃಹ ಸಚಿವ ಆರ್. ಅಶೋಕ್ ಅವರು ಕಾನೂನಿನಲ್ಲಿ ಇಲ್ಲದ ಗೂಂಡಾ ಕಾಯ್ದೆಯನ್ನು ಜ್ಞಾನಭಾರತಿ ಅತ್ಯಾಚಾರ ಪ್ರಕರಣದಲ್ಲಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿರುವಾಗ ಅವರದೇ ಗೃಹ ಇಲಾಖೆಯಡಿ ಬರುವ ಪೊಲೀಸ್ ಇಲಾಖೆಯ ಅಧಿಕಾರಿ, ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶನಿವಾರ ಸಸ್ಪೆಂಡ್ ಆಗಿದ್ದಾರೆ.
ನಾಡಿನ ದೌರ್ಭಾಗ್ಯವೆಂದರೆ ಮಹಿಳಾ ಪೊಲೀಸ್ ಪೇದೆಗಳೂ ಇದಕ್ಕೆ ಸಾಥ್ ನೀಡಿದ್ದಾರೆ. ಮತ್ತು ಅವರೂ ಸಸ್ಪೆಂಡ್ ಆಗಿದ್ದಾರೆ. ಇಡೀ ದೇಶದಲ್ಲಿ ಅತ್ಯಾಚಾರದ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದರೂ ಪೊಲೀಸರೇ ಇಂತಹ ನೀಚ ಕೃತ್ಯಕ್ಕೆ ಕೈಹಾಕಿರುವುದು ರಾಜ್ಯ ಪೊಲೀಸ್ ಇಲಾಖೆಯ ಮಾನವನ್ನು ಹರಾಜು ಹಾಕಿದಂತಿದೆ.
ಆಗಿದ್ದೇನು?: ದೂರು ನೀಡಲು ಬಂದಿದ್ದ ಮಹಿಳೆಯ ಮೇಲೆಯೇ ಒಬ್ಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಇಬ್ಬರು ಪೇದೆಗಳು ಅತ್ಯಾಚಾರ ನಡೆಸಿದ್ದರು. ಇದಕ್ಕೆ ಮಹಿಳಾ ಪೇದೆಗಳಿಬ್ಬರು ಸಮ್ಮತಿಸಿದ್ದರು. ಈ ಬಗ್ಗೆ ಬಾಧಿತ ಮಹಿಳೆ ದೂರು ನೀಡಿದ್ದರು.
ಮೂಡಿಗೆರೆ ತಾಲ್ಲೂಕಿನ ಮಾವಿನಕೆರೆಯವರಾದ ಚಿಕ್ಕಮಗಳೂರಿನ ವಿಜಯಪುರ ನಿವಾಸಿ ಬಾಧಿತ ಮಹಿಳೆ. ಈಕೆಯ ಮೇಲೆ ಫೆಬ್ರವರಿ 17ರಂದು ಈ ಮೂವರು ಅತ್ಯಾಚಾರವೆಸಗಿದ್ದರು ಎನ್ನಲಾಗಿದೆ.
ನಡೆದಿದ್ದೇನು?: ಕಳವು ಪ್ರಕರಣದ ಆರೋಪಿ ರೇಖಾ ಎಂಬುವವರಿಂದ ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲು ಆಕೆಯೊಂದಿಗೆ ಅಲ್ದೂರು ಠಾಣೆಯ ಎಸ್ ಐ ಶಿವಕುಮಾರ್ ಮತ್ತು ಪೊಲೀಸ್ ಪೇದೆಗಳಾದ ಮಹೇಶ್ ಹಾಗೂ ಗುರುರಾಜ್ ಕಳೆದ ವಾರ ಬೆಂಗಳೂರಿಗೆ ಹೊರಟಿದ್ದರು. ಆ ಸಂದರ್ಭದಲ್ಲಿ ಈ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಇದಕ್ಕೆ ಮಹಿಳಾ ಪೇದೆಗಳಾದ ಕೃತಿಕಾ ಹಾಗೂ ನಂದಿನಿ ಸಹಕಾರ ನೀಡಿದ್ದರೆನ್ನಲಾಗಿದೆ.
ಈ ಬಗ್ಗೆ ಅತ್ಯಾಚಾರಕ್ಕೊಳಗಾದ ರೇಖಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಎಸ್ಪಿ ಎನ್ ಶಶಿಕುಮಾರ್ ಸಲಹೆಯ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳು ನಾಪತ್ತೆ!: ಪ್ರಕರಣ ದಾಖಲಾಗುತ್ತಿದ್ದಂತೆ ಆಲ್ದೂರು ಪಿಎಸ್ಐ ಶಿವಕುಮಾರ್, ಪೇದೆಗಳಾದ ಮಹೇಶ್, ಗುರುರಾಜ್ ಹಾಗೂ ಮಹಿಳಾ ಪೇದೆಗಳಾದ ಕೃತಿಕಾ, ನಂದಿನಿ ಎಂಬವರು ತಲೆಮರೆಸಿಕೊಂಡಿದ್ದಾರೆ. ಈ ಐವರನ್ನೂ ಅಮಾನತುಗೊಳಿಸಿ ಐಜಿಪಿ ಪ್ರತಾಪ್ ರೆಡ್ಡಿ ಇಂದು ಶನಿವಾರ ಆದೇಶ ನೀಡಿದ್ದಾರೆ.












Click it and Unblock the Notifications