2 ದಿನ ಬಂದ್: ಕರ್ನಾಟಕ ಕಳೆದುಕೊಂಡಿದ್ದೇನು?

ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ (BCIC) ಹೇಳಿಕೆಯ ಪ್ರಕಾರ ಒಕ್ಕೂಟದ ಸದಸ್ಯ ಕಂಪನಿಗಳು 1,000 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನು ಅನುಭವಿಸಿವೆ.
ಸುಮಾರು 136 ಕಂಪನಿಗಳು ಅನುಭವಿಸಿದ ನಷ್ಟದ ಲೆಕ್ಕಾಚಾರವಷ್ಟೇ ಇದಾಗಿದೆ. ಇದರಲ್ಲಿ ಹೆಚ್ಚಿನವು ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದವು. ಎಲ್ಲ ಸದಸ್ಯ ಕಂಪನಿಗಳೂ ಅನುಭವಿಸಿರುವ ನಷ್ಟವನ್ನು ಲೆಕ್ಕ ಹಾಕಿದರೆ ಅದರ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು BCIC ತಿಳಿಸಿದೆ.
ಕರ್ನಾಟಕದ ಜಿಡಿಪಿಗೆ ಉತ್ಪಾದನೆ ವಲಯದ ಕೊಡುಗೆ ಶೇ. 25ರಷ್ಟಿದೆ. ಹಾಗಿರುವಾಗ ಇಂತಹ ಮುಷ್ಕರಗಳು ಮುಂದುವರಿದರೆ ಉದ್ಯೋಗಾವಕಾಶಗಳಿಗೆ ಕೊಕ್ಕೆ ಬೀಳಲಿದೆ ಎಂಬುದು BCIC ಹೇಳಿಕೆಯ ತಾತ್ಪರ್ಯವಾಗಿದೆ.
ದುರ್ಭಿಕ್ಷದಲ್ಲಿ ಅಧಿಕ ಮಾಸ: ಹಾಗಾದರೆ BCICಗೆ 2-ದಿನಗಳ ಬಂದ್ ಬೇಕಿರಲಿಲ್ಲವಾ ಅಂದರೆ ಈಗಾಗಲೇ ಕರ್ನಾಟಕ ಸೇರಿದಂತೆ ಎಲ್ಲೆಡೆ ಹಿಂಜರಿತ ಇದೆ. ಇಂತಹ ದುರ್ಭರ ಸಮಯದಲ್ಲಿ ಯಾರಿಗೆ ಬೇಕು ಈ ಮಷ್ಕರ. ಇದು ನಿಜಕ್ಕೂ ಅನ್ಯಾಯ ಎಂದು ಒಕ್ಕೂಟದ ಅಧ್ಯಕ್ಷ ಎಂ ಲಕ್ಷ್ಮಿನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಉತ್ಪಾದನೆ ವಲಯಕ್ಕಂತೂ ಇಂತಹ ಪರಿಸ್ಥಿತಿ ಭಾರಿ ಹೊರೆಯಾಗುತ್ತದೆ. ಈಗಾಗಲೇ ಈ ಕಂಪನಿಗಳ ಉತ್ಪನ್ನಗಳು ಬೇಡಿಕೆಯಿಲ್ಲದೆ ಹಾಗೇ ಉಳಿದಿವೆ. ಅಂತಹುದರಲ್ಲಿ ಎರಡು ದಿನಗಳ ಮುಷ್ಕರ ನಿಜಕ್ಕೂ ದುಬಾರಿಯೇ ಎಂದು BCIC ಹೇಳಿದೆ.
ಕಾರ್ಮಿಕ ಒಕ್ಕೂಟಗಳು ನಡೆಸುವ ಮುಷ್ಕರ ಕಾನೂನುಬದ್ಧವೇ ಆದರೂ ದೇಶದ ಇಂದಿನ ಶೋಚನೀಯ ಆರ್ಥಿಕ ಪರಿಸ್ಥಿತಿಯ ಸಮ್ಮುಖದಲ್ಲಿ ಕಾರ್ಮಿಕರು ಚರ್ಚೆಗೆ ಕುಳಿತು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಬೇಕಿತ್ತು. ಇಂದಿನ ಉದಾರೀಕರಣದ ದಿನಗಳಲ್ಲಿ ಮತ್ತು ಅತ್ಯಂತ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಮುಷ್ಕರಗಳನ್ನು ನಡೆಸುವಾಗ ಮುಂದಾಲೋಚನೆ ನಡೆಸಬೇಕು ಎಂಬುದು BCIC ಪ್ರತಿವಾದವಾಗಿದೆ.
2-ದಿನಗಳ ಮುಷ್ಕರದಿಂದ ಉತ್ಪಾದನೆ ವಲಯದ ಜತೆಗೆ ಬ್ಯಾಂಕಿಂಗ್, ವಿಮೆ, ಸಾರಿಗೆ ಕ್ಷೇತ್ರಗಳೂ ನಷ್ಟ ಅನುಭವಿಸಿದವು. ಇದನ್ನು ಸರಿದೂಗಿಸಲು ಕಂಪನಿಗಳು ಮತ್ತು ಅದರ ಉದ್ಯೋಗಿಗಳು ಹೆಚ್ಚಿನ ಶ್ರಮ ಹಾಕಬೇಕಿದೆ ಎನ್ನುತ್ತಾರೆ BCIC ಉಪಾಧ್ಯಕ್ಷ ಎಚ್ ವಿ ಹರೀಶ್.












Click it and Unblock the Notifications