ಮಂಗಳೂರು :ಬಜರಂಗದಳದಿಂದ ಪಬ್ ಮೇಲೆ ದಾಳಿ

ಅತ್ತಾವರದಲ್ಲಿರುವ ರಾಕ್ಸ್ ಕೆಫೆ ಮೇಲೆ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿ ನಂತರ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಫೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಹೀಗಾಗಿ ದಾಳಿ ನಡೆಸಬೇಕಾಯಿತು ಎಂದು ಬಜರಂಗ ದಳ ಕಾರ್ಯಕರ್ತರು ಹೇಳಿದ್ದಾರೆ.
ದಾಳಿ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಪೊಲೀಸರು ಕೆಫೆಯಲ್ಲಿದ್ದ ಮೂವರು ಹುಡುಗರು, ನಾಲ್ಕು ಯುವತಿಯರು ಸೇರಿ ಒಟ್ಟು 7 ಜನ ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧನದ ವೇಳೆ ಎಲ್ಲರೂ ಸಹಜವಾದ ಉಡುಪು ಧರಿಸಿದ್ದರು. ಬಂಧಿತರಲ್ಲಿ ಒಬ್ಬ ಅನ್ಯಧರ್ಮದ ಹುಡುಗ ಎಂದು ತಿಳಿದು ಬಂದಿದೆ.
ರಾಕ್ ಕೆಫೆ ಐಸ್ ಕ್ರೀಮ್ ಪಾರ್ಲರ್ ಆಗಿದೆ. ಇಲ್ಲಿ ಯುವಕ, ಯುವತಿಯರು ಬಂದು ಗಂಟೆಗಟ್ಟಲೇ ಹರಟೆ ಹೊಡೆಯುತ್ತಾ ಕೂರುವುದು ಸಾಮಾನ್ಯ ಸಂಗತಿಯಾಗಿದೆ. ಇದುವರೆವಿಗೂ ಇಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆದ ಆರೋಪ ಕೇಳಿ ಬಂದಿಲ್ಲ ಎಂದು ಸ್ಪಂದನ ಟಿವಿ ಪ್ರತಿನಿಧಿ ರಾಮದಾಸ್ ಅವರು ಒನ್ ಇಂಡಿಯಾ ಕನ್ನಡ ತಾಣಕ್ಕೆ ತಿಳಿಸಿದ್ದಾರೆ.
ಫ್ಲ್ಯಾಶ್ ಬ್ಯಾಕ್: 2009 ಜನವರಿ ತಿಂಗಳು ಶ್ರೀರಾಮಸೇನೆಯ 40 ಕಾರ್ಯಕರ್ತರು ಮಂಗಳೂರಿನ ಅಮ್ನೇಶಿಯಾ ಪಬ್ ಗೆ ದಾಳಿಯಿಟ್ಟು ಹುಡುಗಿಯರ ಮೇಲೆ ದೌರ್ಜನ್ಯ ನಡೆಸಿದ್ದರು. ಇದಾದ ನಂತರ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ಇದೇ ರೀತಿ ದಾಳಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
2009ರ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಘಟನೆ ಮುಖ್ಯಸ್ಥ ಮುತಾಲಿಕ್, 'ಸಂಘಟನೆಯ ಮೇಲೆ ಇದೊಂದು ಕಪ್ಪು ಚುಕ್ಕೆ ಎಂದಿದ್ದರು. ಮಂಗಳೂರು ಪಬ್ ದಾಳಿಯಿಂದ ಶ್ರೀರಾಮಸೇನೆಯ ಮೇಲೆ ಕೆಲ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಿದೆ. ಹುಡುಗಿಯರ ನಡೆದ ದಾಳಿಯನ್ನು ಅಂದು ಎಲ್ಲರೂ ಖಂಡಿಸಿದರು. ಇದರಿಂದ ಕೆಲ ವರ್ಗದ ಮಹಿಳೆಯರು ಸಂಘಟನೆಯನ್ನು ನೋಡುವ ದೃಷ್ಟಿಯೇ ಬೇರೆಯಾಗಿದೆ ಎಂದಿದ್ದರು.
ಘಟನೆ ನಡೆದು ಸುಮಾರು ಎರಡು ವರ್ಷಗಳ ನಂತರ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಮಂಗಳೂರಿನಲ್ಲಿ ಸೇನೆಯ ಕಾರ್ಯಕರ್ತರು ನಡೆಸಿದ ಪಬ್ ಮೇಲಿನ ದಾಳಿ ಸಂಪೂರ್ಣ ತಪ್ಪು. ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸುವ ಪ್ರಕರಣ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ರಾಕ್ಸ್ ಕೆಫೆ ದಾಳಿ ಬಗ್ಗೆ ಬಜರಂಗ ದಳ ಮುಖ್ಯಸ್ಥರಾಗಲಿ, ಶ್ರೀರಾಮಸೇನೆ ಮುಖ್ಯಸ್ಥರಾಗಲಿ ಪ್ರತಿಕ್ರಿಯೆ ನೀಡಿಲ್ಲ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆದರೆ, ದಾಳಿ ಮಾಡಿದ ಬಜರಂಗ ದಳ ಕಾರ್ಯಕರ್ತರ ಮೇಲೆ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ ಎಂಬ ವಿಷಯ ತಿಳಿದು ಬಂದಿದೆ.












Click it and Unblock the Notifications