ಬಡ ಹೃದ್ರೋಗಿಗಳಿಗೆ ಇಎಂಐ ಎಂಬ ಆಶಾಕಿರಣ

ಹೃದ್ರೋಗ ಹೇಳಿಕೇಳಿ ಬರುವುದಿಲ್ಲ. ಹೃದಯ ತಾಳ ತಪ್ಪುತ್ತಿದೆ ಎಂದು ಗೊತ್ತಾಗುತ್ತಿದ್ದರೂ ಅನೇಕರು ನಿರ್ಲಕ್ಷಿಸುತ್ತಾರೆ. ಇದ್ದಕ್ಕಿದ್ದಂತೆ ಆಸ್ಪತ್ರೆ ಮೆಟ್ಟಿಲು ಹತ್ತಬೇಕಾಗಿ ಬಂದು, ಕಡಿಮೆ ಅವಧಿಯಲ್ಲೇ ಲಕ್ಷಾಂತರ ರು. ಹೊಂದಿಸಬೇಕಾಗಿ ಬರುತ್ತದೆ. ಆಸ್ಪತ್ರೆಯ ಬಿಲ್ ನೆನೆಸಿಕೊಂಡೇ ಅನೇಕರು ಹೃದಯ ಒಡೆದುಕೊಂಡಿರುತ್ತಾರೆ.
ಭಾರತದಲ್ಲಿ ಪ್ರತಿವರ್ಷ ಹೃದಯಬೇನೆಯಿಂದ ಸುಮಾರು 30 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಅವರಲ್ಲಿ ಅನೇಕರು ಹೃದಯದ ಚಿಕಿತ್ಸೆಗೆ ನೀಡಬೇಕಾದ ಹಣವನ್ನು ನೀಡಲು ಸಾಧ್ಯವಾಗದೆ, ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದರಿಂದ ಸಾವಿಗೀಡಾಗುತ್ತಿದ್ದಾರೆ. ಇನ್ನು ಮುಂದೆ ಎಲ್ಲ ಮೊತ್ತವನ್ನು ಒಂದೇಬಾರಿಗೆ ಕಟ್ಟಬೇಕಾದ ಪ್ರಮೇಯ ಬರುವುದಿಲ್ಲವಾದ್ದರಿಂದ ಕೂಡಲೆ ಚಿಕಿತ್ಸೆ ಪಡೆಯಲು ಬಡವರು ಹಿಂಜರಿಯಬಾರದು.
ಬೆಂಗಳೂರು ಮತ್ತು ಮೈಸೂರಿನಲ್ಲಿ ಸುಮಾರ್ 20ಕ್ಕೂ ಹೆಚ್ಚು ಆಸ್ಪತ್ರೆಗಳು ಬಡರೋಗಿಗಳಿಗಾಗಿ ಇಎಂಐ (Equated Monthly Installment) ಸೌಲಭ್ಯ ನೀಡಲು ಆರಂಭಿಸಿವೆ. ಬೆಂಗಳೂರಿನಲ್ಲಿ ಸಾಗರ್, ಟ್ರಿನಿಟಿ ಮತ್ತು ಪೆನೇಶಿಯಾ ಆಸ್ಪತ್ರೆಗಳು ಹೆಲ್ದಿ ಹಾರ್ಟ್ ಫಾರ್ ಆಲ್ (HHFA) ಎಂಬ ಕಾರ್ಯಕ್ರಮ ರೂಪಿಸಿವೆ. ಮೈಸೂರಿನಲ್ಲಿ ಫಾರ್ಟಿಸ್ ಮತ್ತು ವಿಕ್ರಮ್ ಆಸ್ಪತ್ರೆಗಳು ಇಎಂಐ ಸೌಲಭ್ಯವನ್ನು ತಿಂಗಳ ಹಿಂದೆಯೇ ಆರಂಭಿಸಿವೆ.
ಸಾಗರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಕೆ.ಎಸ್. ಕಿಶೋರ್ ಅವರ ಪ್ರಕಾರ, ರೋಗಿಗಳು ಕೊನೆ ಕ್ಷಣದಲ್ಲಿಯೇ ಆಸ್ಪತ್ರೆಗೆ ಬರುತ್ತಾರೆ. ಲಕ್ಷಾಂತರ ರು. ಹಣವನ್ನು ಹೊಂದಿಸುವುದು ಅನೇಕರಿಗೆ ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಇಎಂಐ ಸೌಲಭ್ಯ ಬಡವರ ಪಾಲಿನ ಆಶಾಕಿರಣವಾಗಿದೆ. ರೋಗಿಗಳು ಈ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗುವ ಕಾರ್ಡನ್ನು ಸ್ವೈಪ್ ಮಾಡಿ ಯಾವುದೇ ಬಡ್ಡಿಯಿಲ್ಲದೆ 6 ಕಂತುಗಳಲ್ಲಿ ಹಣವನ್ನು ಸಂದಾಯ ಮಾಡಬಹುದಾಗಿದೆ.
ಮುಂದೆ ಬೇಕಾದರೆ ಶೇ. 8.25ರಷ್ಟು ಬಡ್ಡಿಯ ಆಧಾರದ ಮೇಲೆ ಹಣ ಕಟ್ಟುವುದನ್ನು 7 ವರ್ಷಗಳ ವರೆಗೆ ವಿಸ್ತರಿಸಬಹುದಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಆಂಜಿಯೋಪ್ಲಾಸ್ಟಿ, ಬೈಪಾಸ್ ಸರ್ಜರಿ, ತೆರೆದ ಹೃದಯ ಶಸ್ತ್ರಚಿಕಿತ್ಸೆ, ರೋಬಾಟಿಕ್ ಸರ್ಜರಿ, ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ವಾಲ್ವ್ ಬದಲಾಯಿಸುವ ಚಿಕಿತ್ಸೆಗಳಿಗೂ ಇಎಂಐ ಸೌಲಭ್ಯವನ್ನು ನೀಡುತ್ತಿವೆ.












Click it and Unblock the Notifications