ಸದ್ಯಕ್ಕೆ ರಾಜೀನಾಮೆ ನೀಡೋಲ್ಲ, ಮುಂದೆ ಗೊತ್ತಿಲ್ಲ

'ಸನ್ಮಾನ್ಯ ಯಡಿಯೂರಪ್ಪ ಅವರೇ ಎಂದೆಂದಿಗೂ ನನ್ನ ನಾಯಕರು. ಅವರು ರಾಜೀನಾಮೆ ನೀಡುವಂತೆ ತನಗೆ ಸೂಚಿಸಿಲ್ಲ. ಹಾಗಾಗಿ ರಾಜೀನಾಮೆ ನೀಡುವ ಪ್ರಸ್ತಾವನೆ ಸದ್ಯಕ್ಕಿಲ್ಲ' ಎಂದು ಸ್ಪಷ್ಟಪಡಿಸಿರುವ ರೇಣುಕಾಚಾರ್ಯ ಅವರು, ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಸೇರುವವರ ಎರಡನೆಯ ಪಟ್ಟಿಯಲ್ಲಿ ತಮ್ಮ ಹೆಸರು ದಾಖಲಾಗಿರುವ ಬಗ್ಗೆಯೂ ಗೊತ್ತಿಲ್ಲ ಎಂದಿದ್ದಾರೆ.
ಬಿಜೆಪಿ ಬಿಡುವ ಆಲೋಚನೆಯನ್ನೂ ಸುತರಾಂ ಮಾಡಿಲ್ಲ ಎಂದಿರುವ ರೇಣುಕಾಚಾರ್ಯ ಜನಾದೇಶದಂತೆ ತನ್ನ ಅಧಿಕಾರ ಅವಧಿ ಪೂರ್ಣಗೊಳಿಸಲಿದೆ. ಒಂದು ದಿನ ಮುಂಚಿತವಾಗಿಯೂ ಬಿಜೆಪಿ ಸರ್ಕಾರ ಚುನಾವಣೆಗೆ ಹೋಗಲ್ಲ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ಕ್ಷೇತ್ರದ ಮತದಾರರೇ ನನ್ನ ಪ್ರಭುಗಳು. ಅವರ ಹಾಗೂ ಪಕ್ಷದ ಕಾರ್ಯಕರ್ತರ ಅಣತಿಯಂತೆ ತಾವು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
'ನನ್ನ ಕೊನೆಯುಸಿರಿರುವ ತನಕ ಯಡಿಯೂರಪ್ಪನವರಿಗೆ ಗೌರವ ಕೊಡುತ್ತೇನೆ. ಕ್ಷೇತ್ರದ ಜನರ ಸಲಹೆ ಮೀರಿ ಯಾವುದೇ ತೀರ್ಮಾನ ಕೈಗೊಳ್ಳಲಾರೆ. ಈ ಹಿಂದೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಜಿಎಂ ಮಲ್ಲಿಕಾರ್ಜುನಪ್ಪರ ಅವಧಿಯಿಂದಲೂ ತಮ್ಮನ್ನು ಆ ಕುಟುಂಬದವರು ತುಂಬಾ ಪ್ರೀತಿಯಿಂದ ಕಂಡಿದ್ದಾರೆ. ಈಗ ಅವರ ಪುತ್ರ, ಸಂಸದ ಜಿಎಂ ಸಿದ್ದೇಶ್ವರ್ ಸಹ ತಮಗೆ ಮಾರ್ಗದರ್ಶಕರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ತಾವು ಏನೇ ತೀರ್ಮಾನ ಕೈಗೊಳ್ಳುವ ಮುನ್ನ ಸಿದ್ದೇಶ್ವರ್, ಶಾಸಕ ಮಿತ್ರರಾದ ಎಸ್ವಿ ರಾಮಚಂದ್ರ, ಮಾಡಾಳು ವಿರೂಪಾಕ್ಷಪ್ಪರೊಂದಿಗೆ ಚರ್ಚಿಸುವೆ. ಅವರ ಸಲಹೆ ಹಾಗೂ ಕ್ಷೇತ್ರದ ಮತದಾರರ ಅಣತಿಯಂತೆ ಮುಂದಿನ ಹೆಜ್ಜೆ ಇಡುವೆ. ಆದರೆ, ಈಗಲೇ ಏನನ್ನೂ ಹೇಳಲಾರೆ. ಎಲ್ಲವನ್ನೂ ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸುವೆ ಎಂದು ರೇಣುಕಾಚಾರ್ಯ ಸೂಚ್ಯವಾಗಿ ಉತ್ತರಿಸಿದರು.












Click it and Unblock the Notifications