ಲೇಡಿ ಗೋಶನ್, ವೆನ್ ಲಾಕ್ ಆಸ್ಪತ್ರೆಗೆ ಹೊಸ ಹೆಸರು?
ಮಂಗಳೂರು, ಜ.28: ಕರಾವಳಿ ಭಾಗದ ಖ್ಯಾತ ಸರಕಾರಿ ಆಸ್ಪತ್ರೆಗಳಾದ ಲೇಡಿ ಗೋಶನ್ ಮತ್ತು ವೆನ್ ಲಾಕ್ ಆಸ್ಪತ್ರೆಗಳು ಮರುನಾಮಕರಣಗೊಳ್ಳಲಿವೆಯಾ? ಏಕೆಂದರೆ ಈ ಸಂಬಂಧ ಯೋಗೀಶ್ ಭಟ್ ಅವರು ಪ್ರಸ್ತಾವನೆಯೊಂದನ್ನು ಸರಕಾರದ ಮುಂದಿಟ್ಟಿದ್ದಾರೆ.
ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಯೋಗೀಶ್ ಭಟ್ ಅವರು ಸಲ್ಲಿಸಿರುವ ಈ ಪ್ರಸ್ತಾವನೆಯ ಪ್ರಕಾರ ಲೇಡಿ ಗೋಶನ್ ಆಸ್ಪತ್ರೆ ಸಮಾಜ ಸೇವಕ ಕುಡುಮುಲ ರಂಗಾರಾವ್ ಆಸ್ಪತ್ರೆ ಎಂದೂ ಮತ್ತು ವೆನ್ ಲಾಕ್ ಆಸ್ಪತ್ರೆಯು ವೀರ ರಾಣಿ ಅಬ್ಬಕ್ಕ ಆಸ್ಪತ್ರೆ ಎಂದೂ ಹೊಸ ಹೆಸರು ಧರಿಸಲಿವೆ.

ಜಿಲ್ಲಾ ಸಚಿವ ಸಿಟಿ ರವಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಲೇಡಿ ಗೋಶನ್, ವೆನ್ ಲಾಕ್ ಆಸ್ಪತ್ರೆಗಳ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಯೋಗೀಶ್ ಭಟ್ ಅವರು ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಪ್ರಸ್ತಾವನೆಗೆ ಮೇಲ್ಮನೆ ಸದಸ್ಯ ಮೋನಪ್ಪ ಭಂಡಾರಿ ಸಹಮತ ಸೂಚಿಸಿದ್ದಾರೆ.
ಪ್ರಸ್ತಾವನೆ ಸ್ವೀಕರಿಸಿ ಮಾತನಾಡಿದ ಸಚಿವ ರವಿ ಅವರು ಪ್ರಸ್ತಾವನೆಗೆ ತಮ್ಮ ಸಹಮತ ಸೂಚಿಸಿದ್ದು, ಅನುಮೋದನೆಗಾಗಿ ಸರಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
'MRPL ಆರ್ಥಿಕ ನೆರವಿನೊಂದಿಗೆ ಲೇಡಿ ಗೋಶನ್ ಆಸ್ಪತ್ರೆಯ ಸಾಮರ್ಥ್ಯವನ್ನು 500 ಹಾಸಿಗೆಗಳಿಗೆ ಏರಿಸಲು ನಿರ್ಧರಿಸಲಾಗಿದೆ. ಇದೇ ವೇಳೆ, 90 ಲಕ್ಷ ರೂ. ವೆಚ್ಚದಲ್ಲಿ GNM nursing hostel ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ' ಎಂದು ಯೋಗೀಶ್ ಭಟ್ ಸಭೆಗೆ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್ ಪ್ರಕಾಶ್, ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆಎನ್ ವಿಜಯಪ್ರಕಾಶ್, ಮಂಗಳೂರು ನಗರ ಪಾಲಿಕೆಯ ಆಯುಕ್ತ ಡಾ. ಹರೀಶ್ ಕುಮಾರ್ ಮತ್ತು ಸಹಾಯಕ ಆಯುಕ್ತ ಡಾ. ವೆಂಕಟೇಶ್, ಜಿಲ್ಲಾ ವೈದ್ಯಾಧಿಕಾರಿ ಡಾ. ಸರೋಜಾ ಮತ್ತು ಲೇಡಿ ಗೋಶನ್ ಆಸ್ಪತ್ರೆಯ ವೈದ್ಯರಾದ ಡಾ. ಶಕುಂತಲಾ ಮತ್ತಿತರರು ಹಾಜರಿದ್ದರು.












Click it and Unblock the Notifications