ಇಂದು ಸಚಿವೆ ಶೋಭಾ ಕರಂದ್ಲಾಜೆ ರಾಜೀನಾಮೆ
ಬೆಂಗಳೂರು, ಜ.22: ನಾಳೆಯೇ (ಬುಧವಾರ) ಬಿಜೆಪಿಗೆ ರಾಜೀನಾಮೆ ಸಲ್ಲಿಸಿ, ಕರ್ನಾಟಕ ಜನತಾ ಪಕ್ಷವನ್ನು ಅಪ್ಪಿಕೊಳ್ಳಲು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸರ್ವ ಸಿದ್ಧತೆ ನಡೆಸಿದ್ದಾರೆ. ನಿರೀಕ್ಷೆಯಂತೆ ಸಚಿವ ಉದಾಸಿ ಸೇರಿದಂತೆ ಕೆಲ ಶಾಸಕರು/ ಸಚಿವರು ಇವರಿಗೆ ಸಾಥ್ ನೀಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಶೋಭಾ ಅವರು ವಿದಾಯದ ದನಿಯಲ್ಲಿ ತಮ್ಮ ಇಲಾಖೆಯ ಸಾಧನೆಗಳನ್ನು ಮೆಲುಕು ಹಾಕಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣದಲ್ಲಿ ಭಾರಿ ಪ್ರಗತಿ ಸಾಧಿಸಿದೆ. ಇಲಾಖೆ ಸ್ವಾಲಂಬಿಯಾಗಿದೆ ಎಂದೆಲ್ಲ ಹೇಳಿದ್ದಾರೆ.
ಈ ವರೆಗೆ ಸಹಕರಿಸಿದ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ ಸಚಿವೆ ಶೋಭಾ, ಭಾರವಾದ ಹೃದಯದೊಂದಿಗೆ ಇಲಾಖೆಯನ್ನು ಬಿಟ್ಟುಹೋಗುತ್ತಿರುವುದಾಗಿಯೂ ತಿಳಿಸಿದ್ದಾರೆ.

ಅದಕ್ಕೂ ಮುನ್ನ ಇಲಾಖೆಯ ಲೆಕ್ಕ-ರೊಕ್ಕದಲ್ಲಿ ಇಂದಿನ ದಿನಪತ್ರಿಕೆಗಳಲ್ಲಿ ಅರ್ಧ ಪುಟ ಜಾಹೀರಾತು ನೀಡಿರುವ ವಿದ್ಯುತ್ ಸಚಿವೆ ಶೋಭಾ ಅವರು ಅದರಲ್ಲಿ ಇಲಾಖೆಯ ಅಷ್ಟೂ ಸಾಧನೆಗಳನ್ನು ದಾಖಲಿಸಿದ್ದಾರೆ.
ಈ ಮಧ್ಯೆ, ಇಂದು ಬೆಳಗ್ಗೆ ಶೋಭಾ ಕರಂದ್ಲಾಜೆ ಅವರು ಸಚಿವ ಉದಾಸಿ ನಿವಾಸಕ್ಕೆ ಭೇಟಿ ನೀಡಿದ್ದರು. ನಾಳೆ ತಮ್ಮ ಜತೆಗೆ ಯಾರೆಲ್ಲ ರಾಜೀನಾಮೆ ನೀಡಬೇಕು. ಮುಂದಿನ ನಡೆಯೇನು ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಭೇಟಿಯ ವೇಳೆ ಮಾಜಿ ಸಚಿವ ಸಿಸಿ ಪಟೇಲ್ ಸಹ ಉಪಸ್ಥಿರಿದ್ದರು ಎನ್ನಲಾಗಿದೆ.
ಯಡಿಯೂರಪ್ಪ ನಿವಾಸ ಚಟುವಟಿಕೆಯ ಜೇನುಗೂಡು:
ರಾಜ್ಯ ರಾಜಕೀಯವು ನಾಳೆ ಮಹತ್ವದ ವಿದ್ಯಮಾನಗಳನ್ನು ಕಾಣುವ ಲಕ್ಷಣಗಳಿವೆ. ಯಡಿಯೂರಪ್ಪ ಬೆಂಬಲಿಗರ ಸಂಖ್ಯೆ 70 ರಿಂದ 13ಕ್ಕೆ ಕುಸಿದಿದ್ದು, ನಾಳೆ ಅಷ್ಟೂ ಮಂದಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ.
ಈ ಸಂಬಂಧ ಯಡಿಯೂರಪ್ಪ ಅವರ ಮನೆ ಇಂದು ಚಟುವಟಿಕೆಯ ಜೇನುಗೂಡಾಗಿದ್ದು, ಸರಣಿ ಸಭೆಗಳು ನಡೆಯುತ್ತಿವೆ. ನಾಳಿನ ಕಾರ್ಯತಂತ್ರಗಳ ಬಗ್ಗೆ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮಾತುಕತೆ ನಡೆಯುತ್ತಿದೆ. ಇಂದು ಸಂಜೆ 4.30ಕ್ಕೆ ಮಹತ್ವದ ಸಭೆ ನಡೆಯಲಿದೆ ಎಂದು ಯಡಿಯೂರಪ್ಪ ಕಟ್ಟಾಳುಗಳು ತಿಳಿಸಿದ್ದಾರೆ.
ಈ ಮಧ್ಯೆ, ದಾವಣಗೆರೆಯ ಹರಿಹರ ಕ್ಷೇತ್ರದ ಶಾಸಕ ಬಿಪಿ ಹರೀಶ್ ನಾಳೆ ಬುಧವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕೆಜೆಪಿ ಸೇರುತ್ತಿರುವುದಾಗಿ ಗೋವಿನಾಳದಲ್ಲಿ ಮಂಗಳವಾರ ತಿಳಿಸಿದ್ದಾರೆ.












Click it and Unblock the Notifications