ಪಾಕಿಸ್ತಾನಿ ಮಹಿಳಾ ತಂಡಕ್ಕೆ 'ನೋ' ಎಂದ ಮೋದಿ
ಅಹಮದಾಬಾದ್, ಜ.16: ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿ ಭಾಗದ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನಿ ಮಹಿಳೆರು ರಾಜ್ಯ ಪ್ರವೇಶಕ್ಕೆ ರೆಡ್ ಸಿಗ್ನಲ್ ಹೊರಡಿಸಿದ್ದಾರೆ.
ಅಪ್ಪಟ ಕ್ರೀಡಾ ಪ್ರೇಮಿ ನರೇಂದ್ರ ಮೋದಿ ಅವರು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಗೆ ಮಹಿಳಾ ಕ್ರಿಕೆಟ್ ಪಂದ್ಯ ನಡೆಸಲು ಒಪ್ಪಿಗೆ ನೀಡದಿರುವಂತೆ ಆದೇಶಿಸಿದ್ದಾರೆ. ಮಹಿಳಾ ಕ್ರಿಕೆಟ್ ವಿಶ್ವಕಪ್ 2013 ಪಂದ್ಯವನ್ನು ಮುಂಬೈನಿಂದ ಅಹಮದಾಬಾದಿಗೆ ಶಿಫ್ಟ್ ಮಾಡಲು ಬಿಸಿಸಿಐ ನಿರ್ಧರಿಸಿತ್ತು. ಈ ಬಗ್ಗೆ ಐಸಿಸಿ ಒಪ್ಪಿಗೆ ಪಡೆದು ನಂತರ ಮೋದಿ ಸರ್ಕಾರಕ್ಕೆ ಪತ್ರ ಬರೆದಿತ್ತು.

"ಬಿಸಿಸಿಐನಿಂದ ನಮಗೆ(GCA) ಅಹಮದಾಬಾದ್ ಕ್ರೀಡಾಂಗಣಗಳು ವಿಶ್ವಕಪ್ ಪಂದ್ಯಾವಳಿಗೆ ಲಭ್ಯವಿರುವ ಬಗ್ಗೆ ಮನವಿ ಪತ್ರ ಬಂದಿದೆ. ಆದರೆ, ಗಡಿಭಾಗದ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವುದರಿಂದ ಯಾವುದೇ ತಪ್ಪು ಹೆಜ್ಜೆ ಇಡಲು ನಾವು ಸಿದ್ಧರಿಲ್ಲ. ಪಂದ್ಯಗಳನ್ನು ಆಯೋಜಿಸಲು ನಾವು ನಿರಾಕರಿಸಿದ್ದೇವೆ" ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ನ ಕಾರ್ಯದರ್ಶಿ ರಾಜೇಶ್ ಪಟೇಲ್ ಹೇಳಿದ್ದಾರೆ.
ಪಂದ್ಯವನ್ನು ಪೂರ್ವ ನಿಗದಿತ ಮುಂಬೈನಲ್ಲೇ ನಡೆಸಬೇಕೇ ಅಥವಾ ಬೇರೆಡೆ ವರ್ಗಾಯಿಸಬೇಕೆ ಎಂಬುದರ ಬಗ್ಗೆ ಐಸಿಸಿ ಹಾಗೂ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜೇಶ್ ಹೇಳಿದ್ದಾರೆ.
ಇತ್ತೀಚೆಗೆ ಇಂಡಿಯನ್ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಆಡಲು ಬಂದಿದ್ದ ಪಾಕಿಸ್ತಾನ ಆಟಗಾರರ ವಿರುದ್ದ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪಾಕ್ ಆಟಗಾರರು ತಮ್ಮ ದೇಶಕ್ಕೆ ಮರಳಿದ್ದರು.
ಪಾಕ್ ಆಟಗಾರರು ಅಹಮದಾಬಾದಿನಲ್ಲಿ ಆಡುವ ಬಗ್ಗೆ ನರೇಂದ್ರ ಮೋದಿ ಅವರ ಏನು ನಿಲುವು ಹೊಂದಿದ್ದಾರೆ ಎಂಬುದರ ಬಗ್ಗೆ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.
ವೈಬ್ರೇಂಟ್ ಗುಜರಾತ್ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಬಂದಿದ್ದ 22 ಪಾಕಿಸ್ತಾನಿ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಿದ ಮೋದಿ ಸರ್ಕಾರ, ಪಾಕಿಸ್ತಾನಿ ಕ್ರಿಕೆಟರ್ಸ್(ಪುರುಷರ ತಂಡ) ರಾಜ್ ಕೋಟ್ ನಲ್ಲಿ ಆಡಲು ಬಿಟ್ಟಿದ್ದೇಕೆ? ಎಂದು ಸಾಮ್ನಾದಲ್ಲಿ ಪ್ರಶ್ನಿಸಲಾಗಿದೆ.
ಪಾಕಿಸ್ತಾನಿ ಯೋಧರು ಭಾರತದ ಸೈನಿಕರ ರುಂಡ ಕತ್ತರಿಸಿಕೊಂಡು ಹೋದರೂ ನರೇಂದ್ರ ಮೋದಿ ಸುಮ್ಮನಿರುವುದೇಕೆ? ಸುಷ್ಮಾ ಸ್ವರಾಜ್ ಅವರು ಮಾತ್ರ ಈ ಬಗ್ಗೆ ಮಾತನಾಡಬೇಕೆ? ಎಂದು ಪ್ರಶ್ನೆ ಎಸೆಯಲಾಗಿದೆ.
ಮುಂಬೈನಲ್ಲಿ ಜ.31 ಹಾಗೂ ಫೆ.17ರಂದು ಮಹಿಳೆಯರ ವಿಶ್ವಕಪ್ ಪಂದ್ಯಗಳು ನಿಗದಿಯಾಗಿದೆ. 8 ತಂಡಗಳಲ್ಲಿ ಪಾಕಿಸ್ತಾನವೂ ಒಂದಾಗಿದೆ. ಜ.26ಕ್ಕೆ ಪಾಕಿಸ್ತಾನಿ ಮಹಿಳೆಯರ ತಂಡ ಮುಂಬೈಗೆ ಬಂದಿಳಿಯಬೇಕಿದೆ.
ನಿಯಮದ ಪ್ರಕಾರ ಕ್ರೀಡಾಂಗಣ ಬದಲಾವಣೆ ತುಂಬಾ ಕಷ್ಟಕರವಾಗಿದೆ. ಆದರೆ, ಐಸಿಸಿಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕಿದೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications