ಯಾರು ರಾಜೀನಾಮೆ ನೀಡಲ್ಲ, ಸರ್ಕಾರ ಸುಭದ್ರ

ಸದ್ಯಕ್ಕೆ ನಮ್ಮ ಗುರಿ ಜನಪ್ರಿಯ ಬಜೆಟ್ ಮಂಡನೆ ಹಾಗೂ ಮುಂಬರುವ ಚುನಾವಣೆಗೆ ಪಕ್ಷದ ಬಲವರ್ಧನೆ, ಡೆಡ್ ಲೈನ್, ರಾಜೀನಾಮೆ ಬೆದರಿಕೆ ಎಲ್ಲವೂ ಮುಗಿದು ಹೋದ ಕಥೆ ಎಂದು ಈಶ್ವರಪ್ಪ ಹೇಳಿದರು.
ಯಾರೂ ರಾಜಿನಾಮೆ ನೀಡುವುದಿಲ್ಲ ಸರ್ಕಾರ ಸುಭದ್ರವಾಗಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ಮುಂದಿನ ತಿಂಗಳು ಬಜೆಟ್ ಮಂಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಫೆಬ್ರವರಿ ಅಂತ್ಯಕ್ಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ರಾಜ್ಯಧ್ಯಕ್ಷ ಆಗಿರುವ ಕೆಎಸ್ ಈಶ್ವರಪ್ಪ ಬುಧವಾರ(ಜ.16) ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಪಕ್ಷದ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದಾಗಿ ತಿಳಿಸಿದರು.
ಯಡಿಯೂರಪ್ಪನವರ ಅಷ್ಟೂ ಬೆಂಬಲಿಗ ಸಚಿವರು, ಶಾಸಕರು ಹೋಲ್ ಸೇಲ್ ನಲ್ಲಿ ರಾಜೀನಾಮೆ ನೀಡಲಿದ್ದಾರೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಾವೇರಿಯಲ್ಲಿ ಶಾಸಕ ನೆಹರೂ ಓಲೇಕಾರ್ ಅವರು ಹೇಳಿದ್ದರು.
ಹಾವೇರಿಯ ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ 14 ಮಂದಿ ಶಾಸಕರು ಹಾಗೂ ಲೋಕೋಪಯೋಗಿ ಸಚಿವ ಸಿಎಂ ಉದಾಸಿ, ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಅಬಕಾರಿ ಸಚಿವ ರೇಣುಕಾಚಾರ್ಯ ಸೇರಿದಂತೆ ಇನ್ನಿತರರು ಜ. 23ರಂದು ತಮ್ಮ ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಬಿಎಸ್ವೈ ಆಪ್ತ, ಬಿಜೆಪಿ ಶಾಸಕ ನೆಹರೂ ಓಲೇಕಾರ ಅವರ ಭವಿಷ್ಯ ನುಡಿದಿದ್ದರು.
ಈ ಮಧ್ಯೆ, ಕೆಜೆಪಿ ಮುಖಂಡ ವೇಣೂರು ಧನಂಜಯ್ ಕುಮಾರ್ ಆಳ್ವಾ ಅವರು ಜನವರಿ ಅಂತ್ಯಕ್ಕೆ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು. ಅದರೆ,ಈಗ ಫೆ. 15 ಕ್ಕೆ ಜಗದೀಶ್ ಶೆಟ್ಟರ್ ಸರ್ಕಾರ ಪತನಗೊಳ್ಳಲಿದೆ ಎಂದು ಮತ್ತೊಮ್ಮೆ ಭವಿಷ್ಯ ನುಡಿದ್ದಾರೆ.
ಜನವರಿ ಅಂತ್ಯಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಿ.ಎಂ ಉದಾಸಿ ಅವರು ರಾಜೀನಾಮೆ ನೀಡಲಿದ್ದಾರೆ. ನಂತರ ರೇಣುಕಾಚಾರ್ಯ ಹಾಗೂ ಇತರೆ ಯಡಿಯೂರಪ್ಪ ಬೆಂಬಲಿಗರು ಇದೇ ಹಾದಿ ಹಿಡಿಯಲಿದ್ದಾರೆ.
ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ. ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ ಬದಲಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿರುವುದು ಇನ್ನಷ್ಟು ಜನರು ಬಿಜೆಪಿ ತೊರೆಯಲು ದಾರಿ ಮಾಡಿಕೊಟ್ಟಿದೆ ಎಂಬ ಸುದ್ದಿ ಹಬ್ಬಿದೆ.












Click it and Unblock the Notifications