ಉಡುಪಿ ಆರ್ಟಿಐ ಕಾರ್ಯಕರ್ತನ ಭೀಕರ ಹತ್ಯೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮದಗದ ಕೆರೆ ಬಳಿ ವಾಸುದೇವ ಅಡಿಗ ಅವರ ಶವ ಪತ್ತೆಯಾಗಿದ್ದು, ಅವರ ಕೈಕಾಲು ಕಟ್ಟಿ 20 ಕೆಜಿ ತೂಕದ ಕಲ್ಲು ಕಟ್ಟಿ ಕೆರೆಯಲ್ಲಿ ಬಿಸಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಜಿಲ್ಲೆಯ ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಹತ್ಯೆ ಮಾಡಿದವರ ಸುಳಿವು ಇನ್ನೂ ಸಿಕ್ಕಿಲ್ಲ.
ಹಗರಣದ ವಿವರ : ಉಡುಪಿ-ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗಡೆ ಅವರಿಗೆ ಆಪ್ತರಾಗಿದ್ದ ಅಡಿಗ, ಉಡುಪಿ ಮತ್ತು ಕುಂದಾಪುರದಲ್ಲಿ ನಡೆಯುತ್ತಿದ್ದ ಕೆಂಪು ಮತ್ತು ಕಪ್ಪು ಶಿಲೆ ಗ್ರಾನೈಟ್ ಅಕ್ರಮ ಗಣಿಗಾರಿಕೆ ಕುರಿತು ಅವರು ಮಾಹಿತಿ ಸಂಗ್ರಹಿಸುತ್ತಿದ್ದರು. ಉಡುಪಿಯ ನಿರ್ಮಿತಿ ಕೇಂದ್ರದಲ್ಲಿ ನಡೆಯುತ್ತಿದೆ ಎನ್ನಲಾದ ಹಗರಣ ಕುರಿತೂ ಅವರು ಮಾಹಿತಿ ಸಂಗ್ರಹಿಸುತ್ತಿದ್ದರು.
ಉಡುಪಿ ಜಿಲ್ಲೆಯ ಕೋಟ ಸಮೀಪದ ವಂಡಾರು ಗ್ರಾಮದವರಾದ ಅಡಿಗ ಅವರು, ಸಮಾಜಘಾತುಕ ಶಕ್ತಿಗಳ ವಿರುದ್ಧ ಸಮರ ಸಾರಿದ್ದರು. ಕಳೆದ ಸೋಮವಾರ ಅವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಅವರ ಮೋಟರ್ ಬೈಕ್ ಮನೆಯಿಂದ 7 ಕಿ.ಮೀ. ದೂರದಲ್ಲಿ ಪತ್ತೆಯಾಗಿತ್ತು. ಅಡಿಗ ಅವರು ನಾಪತ್ತೆಯಾಗಿರುವ ಕುರಿತು ಅವರ ತಾಯಿ ದೂರು ಸಲ್ಲಿಸಿದ್ದರು.
ಅಡಿಗ ಅವರ ನಾಪತ್ತೆ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸಮಾಜಘಾತುಕ ಶಕ್ತಿಗಳು ಅವರನ್ನು ಅಪಹರಿಸಿರಬಹುದೆಂದು ಶಂಕಿಸಲಾಗಿತ್ತು. ಈ ಪ್ರಕರಣ ಭೇದಿಸಲು ಉಡುಪಿ ಜಿಲ್ಲೆ ಸುಪರಿಂಟೆಂಟ್ ಆಫ್ ಪೊಲೀಸ್ ಎಸ್. ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ಕಾರ್ಯಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಸಬ್ ಇನ್ಸ್ಪೆಕ್ಟರುಗಳ ನೆರವು ಪಡೆಯಲಾಗಿತ್ತು.
ಅವರ ಹುಡುಕಾಟ ನಡೆಸುತ್ತಿದ್ದಾಗ ಆಗುಂಬೆ ಘಾಟಿನಲ್ಲಿ ಕರಿ ಬಣ್ಣದ ಸ್ಕಾರ್ಪಿಯೋ ಕಾರು ಸಾಗಿಹೋಗಿರುವುದು ತಿಳಿದುಬಂದಿದೆ. ಅದರ ಜಾಡನ್ನು ಹಿಡಿದುಕೊಂಡು ಹೋದಾಗ ಕಾಡಿನಲ್ಲಿ ವಾಸುದೇವ ಅಡಿಗ ಅವರ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ. ವಾಸುದೇವ ಅಡಿಗ ಅವರ ನಿಗೂಢ ನಾಪತ್ತೆ ಮತ್ತು ಹತ್ಯೆ ಉಡುಪಿ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಶವ ದೊರೆತಿರುವುದು ತಿಳಿಯುತ್ತಿದ್ದಂತೆ ಜಯಪ್ರಕಾಶ್ ಹೆಗಡೆ ಅವರು ಸ್ಥಳಕ್ಕೆ ಧಾವಿಸಿದ್ದಾರೆ.












Click it and Unblock the Notifications