ಭಾಗವತ್ ಹೇಳಿಕೆ ವಿರುದ್ಧ ತಿರುಗಿಬಿದ್ದ ಮಹಿಳೆ

ಜ.7, ಸೋಮವಾರದಂದು ಬೆಂಗಳೂರಿನ ಬೀದಿಗಿಳಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಾರ್ಯಕರ್ತೆಯರು ಮೋಹನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಹಿಳೆಯರನ್ನು ಅವಮಾನ ಮಾಡಿರುವ ಅವರು ಕೂಡಲೆ ಮಹಿಳೆಯರ ಮತ್ತು ದೇಶದ ಕ್ಷಮಾಪಣೆ ಕೇಳಬೇಕು ಎಂದು ಕೂಗಿದರು.
'ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಕೂಡಲೆ ದೇಶದ ಕ್ಷಮೆ ಕೋರಬೇಕು' ಎಂಬ ಭಿತ್ತಿಪತ್ರಗಳನ್ನು ಹಿಡಿದು ಅವರ ವಿರುದ್ಧ ಮಹಿಳೆಯರು ಧಿಕ್ಕಾರ ಕೂಗಿದರು. ಪುರುಷರು ಭಾಗವತ್ ಅವರ ಭಾವಚಿತ್ರವಿದ್ದ ಕೆಲ ಭಿತ್ತಿಪತ್ರಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಕಾರ್ಯಕ್ರಮವೊಂದರಲ್ಲಿ, "ಮದುವೆ ದಂಪತಿಗಳ ನಡುವಿನ ಒಪ್ಪಂದ. ಆ ಒಪ್ಪಂದದಂತೆ ಗಂಡ ಹೆಂಡತಿಗೆ ರಕ್ಷಣೆ ನೀಡುತ್ತಾನೆ, ಹೆಂಡತಿ ಮನೆಯಲ್ಲಿ ಕೆಲಸ ಮಾಡಿಕೊಂಡು ಬಿದ್ದಿರಬೇಕು. ಮನೆಯಲ್ಲಿ ಇದ್ದುಕೊಂಡು ಮನೆ ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಗಂಡನ ಎಲ್ಲ ಅಗತ್ಯಗಳನ್ನು ಪೂರೈಸಬೇಕು" ಎಂದು ಹೇಳಿರುವುದು ಅವರನ್ನು ವಿವಾದದ ಮಡುವಿಗೆ ತಳ್ಳಿದೆ.
ಇದಕ್ಕೂ ಮೊದಲು ಮೋಹನ್ ಭಾಗವತ್ ಅವರು, ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಗರಗಳಲ್ಲಿ ನಡೆಯುತ್ತಿವೆಯೇ ಹೊರತು ಹಳ್ಳಿಗಳಲ್ಲಿ ಅಲ್ಲ ಎಂದು ಹೇಳಿ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರು ಹಾಗೆ ಹೇಳಿಯೇ ಇಲ್ಲ, ಅವರ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಆರ್.ಎಸ್.ಎಸ್. ಸಮಜಾಯಿಷಿ ನೀಡುವಲ್ಲಿ ನಿರತವಾಗಿದೆ.












Click it and Unblock the Notifications