ಡಿಎಂಕೆ ಏನು ಶಂಕರ ಮಠವಲ್ಲ: ಕರುಣಾ ಪುತ್ರ

ಉತ್ತರಾಧಿಕಾರಿಯನ್ನು ನೇಮಿಸಲು 'ಡಿಎಂಕೆ ಏನು ಶಂಕರ ಮಠವಲ್ಲ' ಎಂದು ಕರುಣಾನಿಧಿ ಅವರ ಹಿರಿಯ ಪುತ್ರ ಅಳಗಿರಿ ಕಿಡಿಕಾರಿದ್ದಾರೆ.
ಹಿರಿ ಮಗ ಎಂ.ಕೆ. ಅಳಗಿರಿಯನ್ನು ಬಿಟ್ಟು ಕಿರಿ ಮಗ ಸ್ಟಾಲಿನ್ ಅವರನ್ನು ತಮ್ಮ ಮುಂದಿನ ಉತ್ತರಾಧಿಕಾರಿ ಎಂದು ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಘೋಷಿಸಿದ್ದರು.
ಆದರೆ, ಸದ್ಯಕ್ಕಂತೂ ನಾನೇ ಮುಖ್ಯಸ್ಥನಾಗಿ ಮುಂದುವರೆಯುತ್ತೇನೆ. ನನ್ನ ಮರಣಾನಂತರ ಸಂಪೂರ್ಣ ಅಧಿಕಾರ ಸ್ಟಾಲಿನ್ ಗೆ ಸಿಗಲಿದೆ ಎಂದು ಕರುಣಾನಿಧಿ ಹೇಳಿದ್ದರು.
ಕರುಣಾನಿಧಿ ಅವರ ನಿರ್ಧಾರದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪತ್ರಕರ್ತರು ಎಸೆದ ಪ್ರಶ್ನೆಗೆ ಅಳಗಿರಿ ಖಾರವಾಗಿ ಉತ್ತರಿಸಿದ್ದಾರೆ.
ಡಿಎಂಕೆ ಮಠವಲ್ಲ. ಇದನ್ನು ನಾನು ಹೇಳುತ್ತಿಲ್ಲ. ನಮ್ಮ ತಂದೆ ಕರುಣಾನಿಧಿ ಅವರೇ ಹಿಂದೊಮ್ಮೆ ಒಮ್ಮೆ ಹೇಳಿದ ಮಾತು. ಈಗ ನಾನು ಅದನ್ನೇ ಹೇಳುತ್ತಿದ್ದೇನೆ ಎಂದು ಅಳಗಿರಿ ಪ್ರತಿಕ್ರಿಯಿಸಿದರು.
ಕರುಣಾ ಕುಟುಂಬ: ಕರುಣಾ ಅವರಿಗೆ ಮೂರು ಮದುವೆಯಾಗಿದೆ. ಅವರ ಪತ್ನಿಯರು: ಶ್ರೀಮತಿ ಪದ್ಮಾವತಿ, ಶ್ರೀಮತಿ ದಯಾಲು ಅಮ್ಮಲ್ ಮತ್ತು ಶ್ರೀಮತಿ ರಾಜದಿಯಮ್ಮಲ್
ಅವರಿಗೆ M.K ಮುತ್ತು, M.K. ಅಳಗಿರಿ, M.K. ಸ್ಟಾಲಿನ್, M.K ತಮಿಳರಸು ಎಂಬ ನಾಲ್ಕು ಪುತ್ರರಿದ್ದಾರೆ ಹಾಗೂ ಸೆಲ್ವಿ ಮತ್ತು ಕಿನ್ನಿಮೊಳಿ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಇಬ್ಬರು ಹೆಣ್ಣುಮಕ್ಕಳಾದ ಸೆಲ್ವಿ ಮತ್ತು ಕಿನ್ನಿಮೊಳಿ, ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ.
ಪದ್ಮಾವತಿ ಮುಂಚೆಯೇ ಅಕಾಲಿಕ ಮರಣವಪ್ಪಿದ್ದು, ಹಿರಿಯ ಮಗ M.K. ಮುತ್ತುಗೆ ಜನ್ಮ ನೀಡಿದ್ದರು. ಅಳಗಿರಿ, ಸ್ಟಾಲಿನ್, ಸೆಲ್ವಿ ಮತ್ತು ತಮಿಳರಸು ದಯಾಲುವಮ್ಮಲ್ ಅವರಿಗೆ ಜನಿಸಿದವರಾಗಿದ್ದು,ಕಿನ್ನಿಮೊಳಿ ಮೂರನೇ ಹೆಂಡತಿ ರಾಜದಿಯಮ್ಮಲ್ ಅವರಿಂದ ಜನಿಸಿದ ಏಕೈಕ ಪುತ್ರಿ. (ಪಿಟಿಐ)












Click it and Unblock the Notifications