ಅತ್ಯಾಚಾರ: ಮತ್ತೆ ಕಿಡಿಕಿಡಿಯಾದ ಶೋಭಾ ಕರಂದ್ಲಾಜೆ

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ತವರು ಜಿಲ್ಲೆಯಲ್ಲೇ ಅತ್ಯಾಚಾರ ಪ್ರಕರಣಗಳು ನಡೆದಿವೆ. ಆದರೆ ಶೆಟ್ಟರ್ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ನೇರವಾಗಿ ಮುಖ್ಯಮಂತ್ರಿ ಮೇಲೆಯೇ ಶೋಭಾ ಪ್ರಹಾರ ನಡೆಸಿದ್ದಾರೆ.
'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಮಾಯಕ ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲವಾಗಿದೆ. ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು' ಎಂದು ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
'ಇಲ್ಲೇನಾಗುತ್ತಿದೆ? ರಾಯಚೂರಿನಲ್ಲಿ ಅಮಾನವೀಯ ಘಟನೆಗಳು ನಡೆಯುತ್ತಿವೆ. ಸರಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ನಾನೂ ಸರಕಾರದ ಒಂದು ಭಾಗವೇ. ಆದರೆ ಇಂತಹ ಅಪರಾಧಗಳನ್ನು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ' ಎಂದು ಶೋಭಾ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ರಾಜ್ಯದಲ್ಲಿ ಕಳೆದೊಂದು ತಿಂಗಳಲ್ಲಿ 20 ಅತ್ಯಾಚಾರ ಪ್ರಕರಣಗಳು ನಡೆದಿವೆ. ಆದರೆ ಯಾವೊಬ್ಬ ಅತ್ಯಾಚಾರಿಗೂ ಶಿಕ್ಷೆಯಾಗಿಲ್ಲ. ಸರಕಾರ ಏನು ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ' ಎಂದು ಸಚಿವೆ ಶೋಭಾ ಕರಂದ್ಲಾಜೆ ಭೀತಿ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಅಶೋಕ್ ಗೆ ತಿರುಗೇಟು: ಇದೇ ವೇಳೆ ಸಚಿವೆ ಶೋಭಾ ನಿನ್ನೆ ಸಿಎಂ ಶೇಟ್ಟರ್ ಗೆ ಪತ್ರ ಬರೆದಿದ್ದಾರಲ್ಲಾ, ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಸುದ್ದಿಗಾರರು ಕೇಳಲಾಗಿ 'ಅವರು ನನಗೇನೂ ಪತ್ರ ಬರೆದಿಲ್ಲ. ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳೇ ಉತ್ತರಿಸುತ್ತಾರೆ' ಎಂದು ಅಶೋಕ್ ಹೇಳಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಶೋಭಾ ಅವರು 'ನನ್ನ ಪತ್ರವನ್ನು ಗೃಹ ಸಚಿವರು ಗಂಭೀರವಾಗಿಯೇನೂ ಪರಿಗಣಿಸಬೇಕಿಲ್ಲ. ಕನಿಷ್ಠ ಅತ್ಯಾಚಾರ ಪ್ರಕರಣಗಳನ್ನಾದರೂ ಗಂಭೀರವಾಗಿ ಪರಿಗಣಿಸಲಿ' ಎಂದು ಅಶೋಕ್ ಗೆ ತಿರುಗೇಟು ನೀಡಿದ್ದಾರೆ.
ಇದ್ದಕ್ಕಿದ್ದ ಹಾಗೆ ಹೀಗೆ ಅತ್ಯಾಚಾರ ಪ್ರಕರಣಗಳ ಬಗ್ಗೆ ಸಚಿವೆ ಶೋಭಾ ಅವರು ಆತಂಕ ವ್ಯಕ್ತಪಡಿಸಿರುವುದು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟುಮಾಡಿದೆ.












Click it and Unblock the Notifications