ಕಾಂಗೈಗೆ ಗುಜರಾತಿನಲ್ಲಾದ ಗತಿಯೇ ಮಹಾರಾಷ್ಟ್ರದಲ್ಲೂ

ಗುಜರಾತಿನಲ್ಲಿ ನರೇಂದ್ರ ಮೋದಿ ಅವರದು ''ಚಾರಿತ್ರಿಕ ಗೆಲುವು'' ಎಂದು ಬಣ್ಣಿಸಿರುವ ಶಿವಸೇನೆಯ ಕಾರ್ಯಕಾರಿ ಅಧ್ಯಕ್ಷ ಉದ್ಧವ್ ಠಾಕ್ರೆ ''ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಇದೇ ಗತಿ ಕಾಣಲಿದೆ' ಎಂದಿದ್ದಾರೆ.
ಅತ್ತ ಗುಜರಾತಿನಲ್ಲಿ ಜಯಘೋಷ ಮೊಳಗುತ್ತಿದ್ದಂತೆ ಮೋದಿಗೆ ಶುಭಾಶಯ ಸಂದೇಶ ಕಳಿಸಿದ ಉದ್ಧವ್ ಠಾಕ್ರೆ, ಗುಜರಾತಿನಲ್ಲಾದಂತೆ ಮುಂದಿನ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಮಣ್ಣುಮುಕ್ಕಲಿದೆ' ಎಂದು ಆಶಿಸಿದ್ದಾರೆ.
'ಗುಜರಾತ್ ಗೆಲುವು ನಿಜಕ್ಕೂ ಚಾರಿತ್ರಿಕವಾಗಿದೆ. ಇದರಿಂದ ಗುಜರಾತಿನಲ್ಲಿ ನಿಮ್ಮನ್ನು (ನರೇಂದ್ರ ಮೋದಿ) ಸೋಲಿಸುವುದು ಅಸಾಧ್ಯ ಎಂಬುದು ಸಾಬೀತಾಗಿದೆ' ಎಂದು ಶಿವಸೇನೆಯ ಉದ್ಧವ್ ವ್ಯಾಖ್ಯಾನಿಸಿದ್ದಾರೆ. 'ನಿಮ್ಮ ನಾಯಕತ್ವದಲ್ಲಿ ಗುಜರಾತ್ ರಾಜ್ಯವು ಕೈಗಾರಿಕೆ, ವಿದ್ಯುತ್, ನೀರು, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಪ್ರಗತಿ ಕಂಡಿದೆ' ಎಂದು ಉದ್ಧವ್ ಹೇಳಿದ್ದಾರೆ.
'ಪಕ್ಕದ ರಾಜ್ಯದಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದಾರೆ. ನಮ್ಮ ಮಹಾರಾಷ್ಟ್ದದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸೋಲುಣಿಸಬೇಕು' ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ.












Click it and Unblock the Notifications