ಹೈ-ಕ ವಿಶೇಷ ಸ್ಥಾನಮಾನಕ್ಕೆ ಲೋಕಸಭೆ ಅಸ್ತು

ಗೃಹ ಖಾತೆ ರಾಜ್ಯ ಸಚಿವ ಆರ್ ಪಿ ಎನ್ ಸಿಂಗ್ ಅವರು ಕಲಂ 371 ಜೆ ತಿದ್ದುಪಡಿ ವಿಧೇಯಕವನ್ನು ಇಂದು ಮಧ್ಯಾಹ್ನ ಸಂಸತ್ತಿನಲ್ಲಿ ಮಂಡಿಸಿದ ಬಳಿಕ ಮತಕ್ಕೆ ಹಾಕಲಾಯಿತು. ಅದಕ್ಕೆ 348-0 ಮತಗಳೊಂದಿಗೆ ಅಂಗೀಕಾರ ದೊರೆಯಿತು.
ಮುಂದೆ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತ ಬಳಿಕ ತಿದ್ದುಪಡಿ ಕಾಯಿದೆಯಾಗಿ ಚಾಲನೆಗೆ ಬರುತ್ತದೆ.
ಇದರೊಂದಿಗೆ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಜನರಿಗೆ ಭಾಗ್ಯದ ಬಾಗಿಲು ತೆರೆದಂತಾಗಿದೆ. ಮುಖ್ಯವಾಗಿ, ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಪ್ರತ್ಯೇಕ ಮೀಸಲಾತಿ ಸೌಲಭ್ಯ ಒದಗಿಸಲಿದೆ.
ಹೋರಾಟಕ್ಕೆ ಸಿಕ್ಕ ಗೆಲುವು: ಇದು ಹೈದರಾಬಾದ್-ಕರ್ನಾಟಕ ಪ್ರದೇಶದ ಜನತೆಗೆ ಸಿಕ್ಕ ಗೆಲುವು. ಹಲವು ವರ್ಷಗಳಿಂದಲೂ ಅನೇಕ ಸಂಘಟನೆಗಳು ನಡೆಸುತ್ತಿದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿ, 371 ಜೆ ಕಲಂ ತಿದ್ದುಪಡಿಗೆ ಮುಂದಾಗಿರುವುದು ಜನರಲ್ಲಿ ಹರ್ಷ ಮೂಡಿಸಿದೆ.
ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಈ ಭಾಗದ ಜನತೆಗೆ ವಿಶೇಷ ಮೀಸಲಾತಿ ಸಿಗಲಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.











Click it and Unblock the Notifications