ಪ್ರಳಯ ಭೀತಿ: ಕುಂದಾಪುರದ ವಿಶೇಷ ಯಾಗ ಸಂಪನ್ನ

ಡಿ.12ರಿಂದ 21ರ ತನಕ ಜಗತ್ತಿನಲ್ಲಿ ಪ್ರಾಕತಿಕ ವಿಪ್ಲವದ ಸಾಧ್ಯತೆ ಇದೆ. ಪ್ರಳಯ ಹಾಗೂ ವಿಪ್ಲವದ ಭಯ ನಿವಾರಣೆಗಾಗಿ ನ.30 ರಿಂದ ಡಿ.2ರಂದು ಕುಂದಾಪುರ ತಾಲೂಕಿನ ಕಟ್ಕೇರೆ ಹರಕೆ ಶ್ರೀಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸಹಸ್ರಮಾನ ನವಕುಂಡ ಪೂರ್ಣಗ್ರಹ ಯಾಗ ಹಮ್ಮಿಕೊಳ್ಳಲಾಗಿತ್ತು ಎಂದು ಎಲ್ಲೂರು ಸೀಮೆಯ ಆಗಮ ವಿದ್ವಾಂಸ ವೇದಮೂರ್ತಿ ಕುತ್ಯಾರು ಶ್ರೀಧರ ತಂತ್ರಿ ವಿವರಿಸಿದರು.
ಲೋಕ ಕಲ್ಯಾಣಾರ್ಥವಾಗಿ, ಗ್ರಹಪೀಡಿತ ಮಾನವ ಕೋಟಿಯ ಉದ್ಧಾರ, ಕಾಲ ಕಾಲಕ್ಕೆ ಮಳೆ ಬೆಳೆಗಾಗಿ ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದ ದಿವ್ಯ ಉಪಸ್ಥಿತಿಯಲ್ಲಿ ಈ ವಿಶೇಷ ಯಾಗದ ಪೂರ್ಣಾಹುತಿ ನಡೆಸಲಾಗಿದೆ ಎಂದರು.
ನ.30 ರಂದು ಹೊರೆಕಾಣಿಕ ಸಮರ್ಪಣೆ ಕಾರ್ಯ ನಡೆಸಲಾಯಿತು. ಡಿ.1 ರಂದು ಸಂಜೆ 4.30ಗಂಟೆಗೆ ಶ್ರೀಶಿಂಶುಮಾರ ಮೃಣ್ಮಯ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಡಿ.2ರಂದು ಪ್ರಾತಃಕಾಲ ಸಹಸ್ರಮಾನ ನವಕುಂಡ ಯಾಗ ಪ್ರಾರಂಭಗೊಂಡಿತು. ಬೆಳಗ್ಗೆ 10.30ಗಂಟೆಗೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀ ಪಾದರ ಉಪಸ್ಥಿತಿಯಲ್ಲಿ ಮಹಾ ಪೂರ್ಣಾಹುತಿ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ 5.30ರಿಂದ ಧಾರ್ಮಿಕ ಸಭೆ ಜರುಗಿತ್ತು. ಶ್ರೀಗಳ ಪಾದಪೂಜೆ, ಮಹಾಮಂತ್ರಾಕ್ಷತೆ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿತು ಎಂದು ಶ್ರೀಧರ ತಂತ್ರಿಗಳು ಹೇಳಿದರು.
ಖಗೋಳ ವ್ಯವಸ್ಥೆಯ ದೇವರೆಂದು ಕರೆಯಲ್ಪಡುವ ಶಿಂಶುಮಾರ ದೇವರ ಆರಾಧನೆ ಮಾಡಿ ಸಹಸ್ರನಾಮ ನವಕುಂಡ ಪೂರ್ಣ ಗ್ರಹ ಯಾಗ ನಡೆಸಲಾಗಿದ್ದು ಈ ಯಾಗದ ಮೂಲಕ ಪ್ರಳಯ ಭಯ ನಿವಾರಣೆಗೆ ಪ್ರಾರ್ಥಿಸಲಾಯಿತು ಎಂದು ಅಧ್ವರ್ಯು ರಾಮಚಂದ್ರ ಭಟ್ಟರು ವಿವರಿಸಿದರು.
ನೂರಾರು ವಿಪ್ರರ ವೇದ ಪಠಣೆ, ವಿವಿಧ ಹೋಮಕುಂಡಗಳಲ್ಲಿ ಪೂಜೆ ನಡೆಯಿತು. ಜಗತ್ತು ಆತಂಕದಲ್ಲಿರುವ ಪ್ರಳಯದ ಭಯ ನಿವಾರಣೆಗಾಗಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನವಗ್ರಹ ಕುಂಡದಲ್ಲಿ ಹತ್ತಿ ಗಿಡ ಬೇರು, ಮುತ್ತುಗ, ಕದಿರೆ,ಉತ್ತರಣೆ, ಅಶ್ವಥ ಗಿಡ, ಬನ್ನಿ, ಗರಿಕೆ, ದರ್ಬೆ, ಎಕ್ಕೆ ಯನ್ನು ಹಾಕಲಾಗಿತ್ತು. ನವಗ್ರಹಗಳ ಹೆಸರಿನಲ್ಲಿ ನವಕುಂಡಗಳಿದ್ದರೆ ಸೂರ್ಯನ ಮಂಡಲವನ್ನು ರಚಿಸಿ ಯಾಗಶಾಲೆಯನ್ನು ನಿರ್ಮಿಸಲಾಗಿತ್ತು.












Click it and Unblock the Notifications