ಕೆಜೆಪಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ

ಡಿ.9 ರಂದು ಹಾವೇರಿಯಲ್ಲಿ ಕರ್ನಾಟಕ ಜನತಾ ಪಕ್ಷ ಉದ್ಘಾಟನೆಯಾಗುತ್ತಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮದವರು ಅಬಕಾರಿ ಸಚಿವ ರೇಣುಕಾಚಾರ್ಯ ಅವರ ಮುಂದೆ ಮೈಕ್ ಹಿಡಿದರೆ, ರೇಣುಕಾ ಅವರು ಉಲ್ಟಾ ಪಲ್ಟಾ ಡೈಲಾಗ್ ಹೊಡೆದು ಎಲ್ಲರನ್ನು ಕಂಗಾಲು ಮಾಡಿಬಿಟ್ಟರು.
ಸಾತನೂರಿಗೆ ಆಗಮಿಸಿದ ರೇಣುಕಾಚಾರ್ಯ ಅವರು, ಕೆಜೆಪಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ. ಬಂದರೆ ನಮಗೆ ಮೊದಲು ತಿಳಿಸುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದರು.
ನೂತನ ಪಕ್ಷ ಕಟ್ಟುತ್ತಿರುವ ಬಿ ಎಸ್ ಯಡಿಯೂರಪ್ಪ ಅವರಿಗೆ ಒಳ್ಳೆಯದಾಗಲಿ. ಕೆಜೆಪಿ ಬಗ್ಗೆ ಇನ್ನೇನೂ ಹೇಳಲಾರೆ ಎಂದು ಅಲ್ಲಿಂದ ಹೊರಟೇ ಬಿಟ್ಟರು ಎಂದು ಸಮಯ ವಾಹಿನಿ ಮಧ್ಯಾಹ್ನದ ಸುದ್ದಿ ಸಮಗ್ರದಲ್ಲಿ ವರದಿ ಮಾಡಿದೆ.
ಯಡಿಯೂರಪ್ಪನವರು ನಮ್ಮ ನಾಯಕರು, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದ್ದು ಎಂದು ಹೇಳಿಕೆ ನೀಡುತ್ತಲೇ ಬರುತ್ತಿದ್ದ ಅಬಕಾರಿ ಸಚಿವ ಎಂ ಪಿ ರೇಣುಕಾಚಾರ್ಯ, ಯಡಿಯೂರಪ್ಪನವರು ಎಲ್ಲಿ ಇರುತ್ತಾರೋ ಅಲ್ಲಿ ನಾವು. ಅವರ ಬೆಂಬಲಿಗರಾದ ನಾವು ಅವರೊಂದಿಗೆ ಹೆಜ್ಜೆ ಹಾಕುತ್ತೇವೆ ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದರು.
ಮನುಷ್ಯನಿಗೆ ಇಷ್ಟೊಂದು ಕೆಟ್ಟ ಬುದ್ಧಿ ಬರಬಾರದು.ಇವತ್ತು ನಾನೇನಾದರೂ ಈ ಕುರ್ಚಿಯಲ್ಲಿ ಕುಳಿತಿದ್ದರೆ ಯಡಿಯೂರಪ್ಪ ಅವರ ಆರ್ಶೀವಾದವೇ ಕಾರಣ. ನನ್ನ ಕೊನೆ ಉಸಿರು ಇರುವವರೆಗೂ ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ರೇಣುಕಾಚಾರ್ಯ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಅಧಿಕಾರ ಪಡೆದು, ಎಲ್ಲ ಸುಖವನ್ನೂ ಅನುಭವಿಸಿ ಈಗ ಅವರ ವಿರುದ್ಧವೇ ಟೀಕೆ ಮಾಡುತ್ತಿರುವವರಿಗೆ ಮುಂದೈತೆ ಮಾರಿ ಹಬ್ಬ. ಜನತೆಯೇ ಅಂತಹವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಎಚ್ಚರಿಸಿದ್ದರು.
ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆಲ್ಲ ಕಾಲ ಮತ್ತು ಜನರೇ ಉತ್ತರ ಕೊಡುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಸಿಟಿ ರವಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಅದರೆ, ಈಗ ಕೆಜೆಪಿ ಬಗ್ಗೆ ಏನು ಗೊತ್ತಿಲ್ಲದ್ದಂತೆ ಹೇಳಿಕೆ ನೀಡಿರುವುದು ಜಾಣ ಮರೆವೋ ಅಥವಾ ರಾಜಕೀಯ ತಂತ್ರವೋ ಕಾದು ನೋಡಬೇಕಿದೆ.












Click it and Unblock the Notifications