ಕೇಂದ್ರ ತಾರತಮ್ಯ: ಕೋಲಾರ ಜಿಲ್ಲೆಗೆ ತಮಿಳುನಾಡು ವಿಷ
ಕೋಲಾರ, ನ.22: ನೆರೆಯ ತಮಿಳುನಾಡು ಮತ್ತೊಮ್ಮೆ ರಾಜ್ಯಕ್ಕೆ ಎರವಾಗಿದೆ. ಇದಕ್ಕೆ ಪೌರೋಹಿತ್ಯವಹಿಸಿರುವುದು ಎಂದಿನಂತೆ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುವ ಕೇಂದ್ರ ಸರಕಾರ.
ತಮಿಳನಾಡಿನ ಜನತೆ ಕೂಡಂಕೊಳಂ ಅಣುವಿದ್ಯುತ್ ಸ್ಥಾವರ ನಮಗೆ ಬೇಡವೇ ಬೇಡ ಎಂದು ಸಮುದ್ರಕ್ಕೆ ಹಾರಿ ಪ್ರತಿಭಟನೆ ನಡೆಸಿದ್ದರಿಂದ ಬೆಚ್ಚಿಬಿದ್ದ ಕೇಂದ್ರ ಸರಕಾರವು ಇದೀಗ 'ಅಯ್ಯಯ್ಯೋ ತಮಿಳುನಾಡಿನ ಜನತೆಗೆ ಎಲ್ಲಾದರೂ ಅನ್ಯಾಯ ಮಾಡುವುದುಂಟಾ? ಪಕ್ಕದಲ್ಲೇ ಇದೆಯಲ್ಲ ಕರ್ನಾಟಕದ ಕೋಲಾರ. ಅಲ್ಲಿ ಅಣು ಕಸ ವಿಷವನ್ನು ಕಕ್ಕುತ್ತೇವೆ. ನೀವು ನೆಮ್ಮದಿಯಾಗಿರಿ' ಎಂದು ಲಾಲಿ ಹಾಡಿದೆ.

ಅದೂ ಸುಪ್ರೀಂಕೋರ್ಟ್ ಅಂಗಳದಲ್ಲೇ ಕೇಂದ್ರ ಸರಕಾರ ಈ ಲಾಲಿ ಹಾಡಿದೆ. ಕೂಡಂಕೊಳಂ ಅಣುವಿದ್ಯುತ್ ಸ್ಥಾವರದ ಅಷ್ಟೂ ತ್ಯಾಜ್ಯವನ್ನು KGFನಲ್ಲಿ ಸುರಿಯುತ್ತೇವೆ ಎಂದು ಕೇಂದ್ರ ಸಾಲಿಸಿಟರ್ ಜನರಲ್ ಅಫಿಡವಿಟ್ ಮೂಲಕ ಬುಧವಾರ (ನ.21) ಸ್ಪಷ್ಟಪಡಿಸಿದ್ದಾರೆ.
ಯಾರನ್ನು ಕೇಳಿ ಅಫಿಡವಿಟ್ ಸಲ್ಲಿಸಲಾಗಿದೆ. ನಾಮ್ ಕೆ ವಾಸ್ತೆ ಆದರೂ ಕರ್ನಾಟಕವನ್ನು ಕೇಂದ್ರ ಸರಕಾರ ಕೇಳಿತಾ? ಉಹುಃ, ತಮಿಳುನಾಡಿಗೆ ನೆರವಾಗುವ ಭರದಲ್ಲಿ ಕರ್ನಾಟಕಕ್ಕೆ ಮಾರಕವಾಗುವ ನಿರ್ಧಾರವನ್ನು ಕೇಂದ್ರ ತೆಗೆದುಕೊಂಡಿದೆ. ಸುದ್ದಿ ತಿಳಿದಿದ್ದೇ ತಡ, ಕೇಂದ್ರದ ವಿರುದ್ಧ ಈಗಾಗಲೇ ಭಾರಿ ವಿರೋಧದ ಅಲೆ ಎದ್ದಿದೆ. ನಾಳೆಯೇ (ನ.23) ಪ್ರತಿಭಟನೆ, ಮುಷ್ಕರ ನಡೆಸಲು ಇಡೀ ಕೋಲಾರ ಎದ್ದುಕುಳಿತಿದೆ.
ಕೋರ್ಟ್ ಕೇಳಿದ್ದೇನು, ಕೇಂದ್ರ ಹೇಳಿದ್ದೇನು?: ಕೂಡಂಕೊಳಂ ಅಣುವಿದ್ಯುತ್ ಸ್ಥಾವರದ ಅಷ್ಟೂ ತ್ಯಾಜ್ಯವನ್ನು ಮಾನವ ಕುಲಕ್ಕೆ ಹಾನಿಯಾಗದಂತೆ ಮತ್ತೊಮ್ಮೆ ಹೇಳುದಾದರೆ ಮಾನವ ಕುಲಕ್ಕೆ ಹಾನಿಯಾಗದಂತೆ ಎಲ್ಲಿ ವಿಲೇವಾರಿ ಮಾಡುತ್ತೀರಿ? ಎಂದು ಸುಪ್ರೀಂಕೋರ್ಟ್ ಕೇಳಿತ್ತು.
ನ್ಯಾ. ಕೆ ಎಸ್ ರಾಧಾಕೃಷ್ಣನ್ ಮತ್ತು ನ್ಯಾ. ದೀಪಕ್ ಶರ್ಮಾ ಅವರಿದ್ದ ದ್ವಿಸದಸ್ಯ ಪೀಠ ಅ. 16ರಂದು ಕೇಂದ್ರ ಸರಕಾರ ಮತ್ತು ಕೂಡಂಕೊಳಂ ಸ್ಥಾವರದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆಯನ್ನು ಕೇಳಿತ್ತು.
ಇದಕ್ಕೆ ಉತ್ತರವೆಂಬಂತೆ 'ತ್ಯಾಜ್ಯಗಳನ್ನು KGFನಲ್ಲಿ ಸುರಿಯುತ್ತೇವೆ' ಎಂದು ಕೇಂದ್ರ ತಿಳಿಸಿದೆ. ತಿರುನಲ್ವೇಲಿಯಿಂದ ಕೆಜಿಎಫ್ 400 ಕಿಮೀ ದೂರದಲ್ಲಿದೆ. ಹೇಗೂ ಕೆಜಿಎಫ್ ಈಗ ಪಾಳುಬಿದ್ದಿದ್ದೆ. ಹಾಗಾಗಿ ಅದು ಅಣು ತ್ಯಾಜ್ಯ ಸಂಸ್ಕರಣೆಗೆ ಸೂಕ್ತ ಸ್ಥಳ ಎಂದು ಅಫಿಡವಿಟಿನಲ್ಲಿ ತಿಳಿಸಲಾಗಿದೆ.
ಕೂಡಂಕೊಳಂ ಅಣು ಸ್ಥಾವರ ತ್ಯಾಜ್ಯಕ್ಕೆ KGF ಎಷ್ಟು ಸೂಕ್ತ? ಓದಿ












Click it and Unblock the Notifications