ಮೂವರು ಎಂಎಲ್ಎ ಒಬ್ಬ ಎಂಪಿ ವಿರುದ್ಧ ಶಿಸ್ತುಕ್ರಮ

ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿರುವ ಶಾಸಕರಾದ ಸುರೇಶ್ ಗೌಡ, ಹರತಾಳು ಹಾಲಪ್ಪ, ಡಿಪಿ ಹರೀಶ್ ಹಾಗೂ ಸಂಸದ ಬಸವರಾಜ್ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸೋಮವಾರ(ನ.19) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೊಸ ಪಕ್ಷ ಕೆಜೆಪಿಗೆ ಇದುವರೆವಿಗೂ ಯಾವುದೇ ಶಾಸಕರು ಹೋಗಿಲ್ಲ. ಕೇವಲ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಯಡಿಯೂರಪ್ಪ ಅವರ ಪಕ್ಷ ಸೇರಲಿದ್ದಾರೆ. ಯಾವೊಬ್ಬ ಶಾಸಕರು ರಾಜೀನಾಮೆ ನೀಡಲು ಮುಂದಾಗಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿರುವ ಶಾಸಕರು ಲೆಕ್ಕಕ್ಕಿಲ್ಲ ಎಂದು ಹೇಳಿದರು.
ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಇತ್ತೀಚೆಗೆ ಶಾಸಕರು, ಸಚಿವರು, ಸಂಸದರು ಹಾಗೂ ಪದಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಯಾವುದೇ ಕಾರ್ಯಕರ್ತರು ಯಡಿಯೂರಪ್ಪ ಅವರ ಹಿಂದೆ ಹೋಗಲ್ಲ ಸಿದ್ಧರಿಲ್ಲ. ಎಲ್ಲರೂ ಪಕ್ಷದ ಜೊತೆಯಲ್ಲೇ ಇರುತ್ತಾರೆ ಎಂದು ಈಶ್ವರಪ್ಪ ಹೇಳಿದರು.
ಸರ್ಕಾರದ ಬಹುಮತಕ್ಕೆ ಭಂಗವಿಲ್ಲ: ಅಧಿಕಾರ ಇದೇ ಎಂದು ವಿಧಾನಸಭೆ ವಿಸರ್ಜಿಸಲು ಬರುವುದಿಲ್ಲ. ಅಸಲಿಗೆ ವಿಧಾನಸಭೆಯನ್ನು ವಿಸರ್ಜಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ಪೂರ್ಣಾವಧಿಯನ್ನು ಪೂರೈಸಲಿದೆ ಎಂದು ಉಪ ಮುಖ್ಯಮಂತ್ರಿ ಈಶ್ವರಪ್ಪ ಸ್ಪಷ್ಟಪಡಿಸಿದರು.
ಡಿ.5 ರಿಂದ 12 ರವರೆಗೂ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸರ್ಕಾರದ ಅಸ್ಥಿತ್ವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಈಶ್ವರಪ್ಪ ಹೇಳಿದರು.
ಜೈಲಿಗೆ ಹೋಗಲು ನಾನು ಕಾರಣವಲ್ಲ: ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ತಪ್ಪು ಮಾಡಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ತಾವಾಗಿಯೇ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ಅವರಿಗೆ ಯಾರೂ ಟೋಪಿ ಹಾಕಿಲ್ಲ. ಹಾಕುವುದೂ ಇಲ್ಲ. ಅವರು ಜೈಲಿಗೆ ಹೋಗಲು ನಾನು ಕಾರಣನಲ್ಲ.
ಬಿಜೆಪಿ ಹಿರಿಯ ಮುಖಂಡರ ಹಿತವಚನಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಯಡಿಯೂರಪ್ಪ ಏನೇ ಮಾತನಾಡಲಿ, ಹೇಳಿಕೆ ನೀಡಲಿ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಸೂಕ್ತ ಸಮಯ ಬಂದಾಗ ಉತ್ತರಿಸುತ್ತೇನೆ. ನಮಗೂ ಶ್ರೀಕೃಷ್ಣನ ತಂತ್ರಗಾರಿಕೆ ಗೊತ್ತಿದೆ ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications