ಬಿಎಸ್ವೈ ಅಪ್ಪ ಬಂದ್ರೂ ನನ್ನನೇನೂ ಮಾಡಲಾಗದು

ಯಶವಂತಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಭಾನುವಾರ (ನ 18) ರಾತ್ರಿ ಬೃಹತ್ ಜೆಡಿಎಸ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಅಧಿಕಾರ ಹಸ್ತಾಂತರಿಸಲಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದೀರಿ. ನಿಮ್ಮ ಜೊತೆ ಕೆಲವೊಂದು ಅಧಿಕಾರಿಗಳು, ಪೊಲೀಸರೂ ಕೈಜೋಡಿಸಿದ್ದಾರೆ ಎನ್ನುವುದು ತಿಳಿದಿದೆ.
ನನ್ನನ್ನು ಜೈಲಿಗೆ ಕಳುಹಿಸಲು ಹೋಗಿ ನಿಮ್ಮ ಗತಿ ಏನಾಯಿತು? ನಿಮಗೆ ಸಹಾಯ ಮಾಡಿದ ಅಧಿಕಾರಿಗಳು ಎಲ್ಲಿ ಹೋಗುತ್ತಾರೆ. ರಾಜಕೀಯದಲ್ಲಿ ನನ್ನ ಸರದಿ ಬಂದೇ ಬರುತ್ತದೆ, ಆವಾಗ ನಿಮಗೆ ಮತ್ತು ನಿಮ್ಮ ಸಹಾಯಕ್ಕೆ ನಿಂತ ಅಧಿಕಾರಿಗಳಿಗೆ ಪಾಠ ಕಲಿಸದೇ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ತೊಡೆ ತಟ್ಟಿದ್ದಾರೆ.
ಸಮಾವೇಶದ ಉದ್ದಕ್ಕೂ ಯಡಿಯೂರಪ್ಪ ವಿರುದ್ದ ಹರಿಹಾಯ್ದ ಕುಮಾರಸ್ವಾಮಿ, ರಾಜ್ಯದ ಜನತೆಯ ಮೇಲೆ 70 ಸಾವಿರ ಕೋಟಿ ರೂಪಾಯಿಯ ಸಾಲ ಹೊರಿಸಿದ್ದು ನಿಮ್ಮ ಸಾಧನೆ. ಬಿಜೆಪಿಯಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದು ನೀವು ಹೊಸ ಪಕ್ಷ ಸ್ಥಾಪಿಸುತ್ತಿದ್ದೀರಲ್ಲಾ ನಿಮಗೆ ಸ್ವಾಭಿಮಾನ ಅನ್ನೋದು ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡುತ್ತೇನೆ ಎಂದು ಹೋದಲೆಲ್ಲಾ ಡಂಗುರ ಸಾರಿದ್ದೀರಿ, ಈಗ ನೀವೇ ಬಿಜೆಪಿಯಿಂದ ಹೊರ ಬಂದಿದ್ದೀರಿ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಜೆಡಿಎಸ್ ನಿರ್ನಾಮ ಆಗುತ್ತೋ ಅಥವಾ ನಿಮ್ಮ ಹೊಸ ಪಕ್ಷ ನಿರ್ನಾಮ ಆಗುತ್ತೋ ನೋಡೇ ಬಿಡೋಣ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದಾರೆ.
ಮಾತು ಮುಂದುವರಿಸುತ್ತಾ ಕುಮಾರಸ್ವಾಮಿ, ಹೆಗಲ ಮೇಲೆ ಹಸಿರು ಶಾಲು ಧರಿಸಿ ರೈತರ ಹೆಸರಿನಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದೀರಿ. ಅದಾದ ಕೆಲವೇ ದಿನದಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲೀಬಾರ್ ನಡೆಸಿದ್ದೀರಿ.
ಈಗ ನಿಮ್ಮ ಹೊಸ ಪಕ್ಷ ಸ್ಥಾಪನೆಗೆ ಹಾವೇರಿ ನಗರವನ್ನು ಆರಿಸಿಕೊಂಡಿದ್ದೀರಿ. ಮುಗ್ದ ರೈತರ ಪ್ರಾಣ ತೆಗೆದ ಪಶ್ಚಾತ್ತಾಪದ ಪರಿಹಾರಕ್ಕಾಗಾ ಎಂದು ಯಡಿಯೂರಪ್ಪನವರನ್ನು ಲೇವಡಿ ಮಾಡಿದ್ದಾರೆ.












Click it and Unblock the Notifications