ಹೆಂಡತಿಯನ್ನು ಬೆಳ್ಳಿ ಚಾಕುವಿನಿಂದ ಚುಚ್ಚಿ ಕೊಂದ ಗಂಡ

30 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಸಂಜಯ್ ಚೌಧರಿ ತನ್ನ ಹೆಂಡತಿ ರುಚಿ ಚೌಧರಿ(28)ಯನ್ನು ಕೊಲ್ಲಲೆಂದೇ ದೆಹಲಿಯಿಂದ ಬಂದಿದ್ದಾಗಿ ಎಚ್ಎಎಲ್ ಪೊಲೀಸರೆದಿರು ಒಪ್ಪಿಕೊಂಡಿದ್ದಾನೆ. ಮಾರತ್ಹಳ್ಳಿಯಲ್ಲಿರುವ ರುಚಿಯ ಮನೆಗೆ ನುಗ್ಗಿ ಹೆಂಡತಿಯೊಡನೆ ಜಗಳ ತೆಗೆದು ಚಾಕುವಿನಿಂದ ತಿವಿದು ಬುಧವಾರ ಹತ್ಯೆಗೈದಿದ್ದಾನೆ ಸಂಜಯ್.
ಭಾರತೀಯ ದಂಡ ಸಂಹಿತೆ 302ನೇ ಸೆಕ್ಷನ್ ಪ್ರಕಾರ ಸಂಜಯ್ ಮೇಲೆ ಕೊಲೆ ಆಪಾದನೆ ಹೊರಿಸಿ ಕೇಸನ್ನು ದಾಖಲಿಸಲಾಗಿದೆ ಎಂದು ತನಿಖೆಯನ್ನು ನಡೆಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತ ಆರ್. ಅಶೋಕ್ ಅವರು ಹೇಳಿದ್ದಾರೆ. ರುಚಿಯ ತಂದೆ ತಾಯಿಯನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ.
ಪೊಲೀಸರ ಪ್ರಕಾರ, ಸಾಲಕ್ಕೆ ಸಂಬಂಧಿಸಿದಂತೆ ಸಂಜಯ್ ಮತ್ತು ರುಚಿ ನಡುವೆ ಮನಸ್ತಾಪ ತಲೆದೋರಿತ್ತು. ಆದರೆ, ರುಚಿ ತನ್ನ ಗಂಡನಿಗೆ ಹಣಕಾಸಿನ ಸಹಾಯ ನೀಡಲು ಹಿಂದೇಟು ಹಾಕಿದ್ದಳು. ದೆಹಲಿಯಿಂದ ವಿಮಾನದಲ್ಲಿ ಬಂದವನೆ ರುಚಿಯೊಡನೆ ಈ ಕುರಿತು ಜಗಳ ತೆಗೆದಿದ್ದಾನೆ. ಜಗಳ ಬಿಡಿಸಲು ಹೋದ ರುಚಿಯ ಪಾಲಕರು ಮತ್ತು ತನ್ನ 3 ವರ್ಷದ ಮಗಳನ್ನು ಮನೆಯಿಂದ ಹೊರಗೆ ತಳ್ಳಿ ಹೆಂಡತಿಯ ಹೊಟ್ಟೆಗೆ ನಿರ್ದಯವಾಗಿ ಚುಚ್ಚಿದ್ದಾನೆ.
ರುಚಿಯ ಪಾಲಕರನ್ನು ಮನೆಯಿಂದ ಹೊರಹಾಕಿ ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ರುಚಿ ಕಿರುಚಿಕೊಳ್ಳಲು ಆರಂಭಿಸಿದ್ದಾಳೆ. ರುಚಿಯ ಪಾಲಕರು ನೆರೆಹೊರೆಯವರು ಸಹಾಯಕ್ಕೆ ಬರಬೇಕೆಂದು ಕೋರಿಕೊಂಡಿದ್ದಾರೆ. ಆದರೆ, ಅಷ್ಟರಲ್ಲಿ ಕೊಲೆ ನಡೆದುಹೋಗಿದೆ. ರುಚಿಯನ್ನು ಕೊಂದತಕ್ಷಣ ಅದೇ ಚಾಕುವಿನಿಂದ ತನ್ನ ಕೈಯ ನರವನ್ನು ಕತ್ತರಿಸಿಕೊಳ್ಳಲು ಸಂಜಯ್ ಯತ್ನಿಸಿದ್ದಾನೆ. ಆದರೆ, ತುಸು ಗಾಯವಾಗಿದ್ದು ಬಿಟ್ಟರೆ ಆತ ಆರೋಗ್ಯವಾಗಿದ್ದಾನೆ.
ನಾಲ್ಕು ವರ್ಷಗಳ ಹಿಂದೆ ರುಚಿ ಮತ್ತು ಸಂಜಯ್ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಅವರಿಬ್ಬರಿಗೆ ಮೂರು ವರ್ಷದ ಮಗಳಿದ್ದಾಳೆ. ಮಗಳನ್ನು ಈಗ ರುಚಿಯ ಪಾಲಕರ ಸುಪರ್ದಿಗೆ ನೀಡಲಾಗಿದೆ. ಸಂಜಯ್ನ ಪಾಲಕರು ದೆಹಲಿಯಿಂದ ಬೆಂಗಳೂರಿಗೆ ಇನ್ನೂ ಬರಬೇಕಿದೆ.












Click it and Unblock the Notifications