ಕೊನೆಗಾಲದಲ್ಲಿ ಕರುಣಾನಿಧಿ ಸ್ಥಿತಿ ಬೇಡ : ದೇವೇಗೌಡ

ನನ್ನ ರಾಜಕೀಯ ಜೀವನದ ಕೊನೆಗಾಲದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತಂದುಕೊಂಡಿರುವ ಸ್ಥಿತಿಯನ್ನು ನಾನು ತಂದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಕುಟುಂಬ ರಾಜಕಾರಣದಿಂದ ಹಾನಿಯೇ ಹೆಚ್ಚು ಎಂದು ದೇವೇಗೌಡರು ಸೂಚ್ಯಮಾತುಗಳಲ್ಲಿ ವ್ಯಕ್ತಪಡಿಸಿದರು.
ಭವಾನಿ ರೇವಣ್ಣ ಅವರು ಚುನಾವಣೆ ಕಣಕ್ಕಿಳಿಯಲಿದ್ದಾರೆ ಎಂಬ ಕಲ್ಪಿತ ಸುದ್ದಿಗಳನ್ನು ಹಬ್ಬಿಸುವುದು ಬೇಡ. ಗಾಳಿಸುದ್ದಿಯಿಂದ ಯಾರಿಗೂ ಲಾಭವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಿವಿಮಾತು ಹೇಳಿದ್ದಾರೆ.
ವಿಶೇಷವೆಂದರೆ ದೇವೇಗೌಡರು ಈ ಮಾತಗಳನ್ನಾಡುವಾಗ ಅವರ ಪುತ್ರ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕೂಡಾ ವೇದಿಕೆ ಮೇಲಿದ್ದರು. ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿಯಲ್ಲಿ ನೂತನ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡದ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೇರವೇರಿಸುವ ಕಾರ್ಯಕ್ರಮದಲ್ಲಿ ಅಪ್ಪ ಮಗ ಪಾಲ್ಗೊಂಡಿದ್ದರು.
ದೇವೇಗೌಡರ ಹೇಳಿಕೆ ನಂತರ ತಮ್ಮ ಪತ್ನಿ ಭವಾನಿ ಸ್ಪರ್ಧಿಸುವ ವಿಚಾರ ಕುರಿತಂತೆ ಪತ್ರಕರ್ತರಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ರೇವಣ್ಣ ನಿರಾಕರಿಸಿದರು.
ಪ್ರಾದೇಶಿಕ ಪಕ್ಷ ಮುಖ್ಯ: ಶ್ರೀಮತಿ ಇಂದಿರಾ ಗಾಂಧಿ ಕೆಟ್ಟ ಕಾನೂನನ್ನು ಜಾರಿಗೆ ತಂದ ಕಾರಣಕ್ಕೆ ಅಂದು ಕೇವಲ ಶೇ.33 ಇದ್ದ ಅಕ್ಷರಸ್ಥರು ಬುದ್ಧಿ ಕಲಿಸಿದರು. ಈಗಲೂ ರಾಜಕೀಯ ಸ್ಥಿತಿಯನ್ನು ಭ್ರಷ್ಟಾಚಾರ ಮತ್ತು ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿದೆ. ಆದರೆ ಪರಿಹರಿಸಲು ಮೊದಲು ರಾಜ್ಯದಿಂದಲೆ ಆಗಲಿ. ಕೇಂದ್ರ ಸರ್ಕಾರದಿಂದಾಗಲಿ ಆಗುತ್ತಿಲ್ಲ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವುದು ಸೂಕ್ತ ಎಂದು ಗೌಡರು ಸೂಚ್ಯವಾಗಿ ಹೇಳಿದರು.
ಹೊಸ ಆರ್ಥಿಕ ನೀತಿಯಿಂದ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಾವು 1991ರಲ್ಲಿ ಲೋಕಸಭೆ ಸದಸ್ಯರಾಗಿದ್ದ ಅವಧಿಯಲ್ಲಿ ಅಧಿವೇಶನದ ಚೊಚ್ಚಲದಲ್ಲಿಯೇ ಹೇಳಿದ್ದೆ.
ಆಗ ಈಗಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಹಣಕಾಸು ಸಚಿವರಾಗಿದ್ದರು ಎಂದು ಪ್ರಸ್ತಾಪಿಸಿದ ಮಾಜಿ ಪ್ರಧಾನಿಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಟ್ರಸ್ಟ್ ಮೂಲಕ ಅಕ್ರಮ ನಡೆಸಿರುವುದು ಅದೇ ಆರ್ಥಿಕ ನೀತಿಯ ಫಲವಾಗಿ ಎಂದು ಹೇಳಿದರು.
ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಿಂದ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುವುದರಿಂದ ಅದಕ್ಕೆ ಹಿಂದೆಯೂ ವಿರೋಧಿಸಿದೆ. ಮೊನ್ನೆ ನಡೆದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿಯೂ ವಿರೋಧಿಸಲಾಗಿದೆ ಎಂದರು.
ಯಡಿಯೂರಪ್ಪ ಕೆಜೆಪಿ ಅಂತ ಹೊಸ ಹಾಡು ಹಾಡುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ಹಾಡು ಹಾಡುತ್ತಾರೋ ಗೊತ್ತಿಲ್ಲ. ಬಿಜೆಪಿ ಸರ್ಕಾರ ಅಳಿವು ಉಳಿವಿನ ಬಗ್ಗೆ ನಮಗೆ ಸಂಬಂಧವಿಲ್ಲ ಎಂದರು.












Click it and Unblock the Notifications