ಮಲ್ಲೇಶ್ವರಂನಲ್ಲಿ ಲವ್ ಮರ್ಡರ್; ವಿದ್ಯಾರ್ಥಿ ಸಾವು
ಎಲೆಕ್ಟ್ರಾನಿಕ್ ಸಿಟಿ ಬಾಲಕೃಷ್ಣ ಎಂಬುವರ ಮಗ 22 ವರ್ಷದ ಅಜಯ್ ಎಂಬ ವಿದ್ಯಾರ್ಥಿಯೇ ಮೃತಪಟ್ಟ ದುರ್ದೈವಿ. ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯಕಂಡ ಉದಾಹರಣೆ ಇತ್ತೀಚೆಗೆ ನಗರದಲ್ಲಿ ಹೆಚ್ಚಾಗಿದ್ದು, ಇದು ಮೂರನೇ ಪ್ರಕರಣವಾಗಿದೆ.
ದೂರಶಿಕ್ಷಣದಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಅಜಯ್, ಖರ್ಚಿಗೆ ಇರಲಿ ಎಂದು ಮನೆಯಿಂದ ಒಂದಿಷ್ಟು ಹಣ ಎತ್ತಿಕೊಂಡು ಮಲ್ಲೇಶ್ವರಂಗೆ ಬಂದಿದ್ದಾನೆ.
ಆತನ ಗೆಳೆಯರಾದ ವಿನಯ್, ಚರಣ್, ರಾಕೇಶ್ ಎಂಬುವರ ಸೇರಿ ಸುತ್ತಾಡಿದ್ದಾರೆ. ಗೆಳೆಯರ ಪೈಕಿ ವಿನಯ್ ಎಂಬುವನು ಹುಡುಗಿಯೊಬ್ಬಳ ಜೊತೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದ. ಅದರೆ, ಸಂಬಂಧ ಇತ್ತೀಚೆಗೆ ಕಡಿತಗೊಂಡಿತ್ತು.
ಈ ಪ್ರೇಮ ಸಂಬಂಧಕ್ಕೆ ಇನ್ನೊಬ್ಬ ಸ್ನೇಹಿತ ರಾಕೇಶನೇ ಕಾರಣ ಎಂದು ಅಜಯ್ ಹಾಗೂ ಚರಣ್ ಗೇಲಿ ಮಾಡಿದ್ದಾರೆ. ತಮಾಷೆಯಲ್ಲಿ ಆರಂಭವಾದ ಮಾತುಕತೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ.
ಈ ಸಂದರ್ಭದಲ್ಲಿ ರಾಕೇಶ್ ಚಾಕುವಿನಿಂದ ಅಜಯ್ ಎದೆಗೆ ಒಮ್ಮೆ ಬಲವಾಗಿ ಇರಿದಿದ್ದಾನೆ. ಜೊತೆಗಿದ್ದ ಸ್ನೇಹಿತರು ತಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಅಜಯ್ ಅವರ ತಾಯಿಗೆ ಕರೆ ಮಾಡಿದ ಚರಣ್ ವಿಷಯ ತಿಳಿಸಿದ್ದಾನೆ.
ಕೂಡಲೇ ಫೋರ್ಟಿಸ್ ಆಸ್ಪತ್ರೆಗೆ ಅಜಯ್ ನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಜಯ್ ಬುಧವಾರ ಮೃತಪಟ್ಟಿದ್ದಾನೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಜಯ್ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ತನಿಖೆ ಮುಂದುವರೆದಿದೆ. ಪರಾರಿಯಾಗಿರುವ ಗೆಳೆಯರಿಗಾಗಿ ಹುಡುಕಾಟ ಜಾರಿಯಲ್ಲಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಠಾಣಾಧಿಕಾರಿಗಳು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಯು ಸಂಜೆ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಇರುದು ಕೊಲ್ಲಲಾಗಿತ್ತು. ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ಆರ್ ಜೆಎಸ್ ಕಾಲೇಜು ವಿದ್ಯಾರ್ಥಿ ಕೊಲೆಯಾಗಿದ್ದ.