ವಿಶ್ವಸಂಸ್ಥೆಯಲ್ಲಿ ಕನ್ನಡ ಕಂಪು ಹರಿಸಿದ ಅನಂತ್ ಕುಮಾರ್
ವಿಶ್ವಸಂಸ್ಥೆ, ಅ.16: ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಅವಕಾಶ ಸಿಗುವುದೇ ದೊಡ್ಡ ವಿಷಯ. ಹೀಗಿರುವಾಗ ಸಂಸದ ಅನಂತ್ ಕುಮಾರ್ ಅವರು ತಮಗೆ ಸಿಕ್ಕ ಸುವರ್ಣ ಅವಕಾಶವನ್ನು ಎರಡೂ ಕೈಯಿಂದ ಬಾಚಿ ಕೊಂಡು ಕನ್ನಡದಲ್ಲಿ ಸ್ವಾಗತ ಕೋರಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ
'ಸನ್ಮಾನ್ಯ ಅಧ್ಯಕ್ಷರೇ ಮತ್ತು ವಿಶ್ವದ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ ನಿಮ್ಮೆಲ್ಲರಿಗೂ ನಮ್ಮ ಮುಂಜಾನೆಯ ಶುಭಾಶಯಗಳು...' ಎಂದು ನೆರೆದಿದ್ದ ಸಭಿಕರನ್ನು ಸ್ವಾಗತಿಸಿದರು.

ವಿಶ್ವಸಂಸ್ಥೆಯ ಪ್ರಧಾನ ಸಭೆಯಲ್ಲಿ ಭಾಗವಹಿಸಿ ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ನಮ್ಮ ನಾಡಿನ ನುಡಿಯ ಗರಿಮೆಯನ್ನು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ, ಬಿಜೆಪಿ ಸಂಸದ ಅನಂತಕುಮಾರ್ ಅವರು ಹೆಚ್ಚಿಸಿದ್ದಾರೆ.
ಜಾಗತಿಕ ಶಾಂತಿ ಮತ್ತು ಮಾನವ ಹಕ್ಕುಗಳ ರಕ್ಷಣೆ, ಭಯೋತ್ಪಾದನೆ ದಮನಕ್ಕೆ ಭಾರತ ಸಂಕಲ್ಪ ತೊಟ್ಟಿದೆ ಎಂದು ಅನಂತ್ ಕುಮಾರ್ ಹೇಳಿದರು.
ವಿಶ್ವಸಂಸ್ಥೆಯ ಐಸಿಟಿಆರ್ ಮತ್ತು ಐಸಿಟಿವೈ 66ನೇ ಸಭೆಯಲ್ಲಿ ಪಾಲ್ಗೊಂಡು ಅನಂತ್ ಕುಮಾರ್ ಮಾತನಾಡಿದರು. ಜಾಗತಿಕ ಮಟ್ಟದ ಅಪರಾಧ ಚಟುವಟಿಕೆಗಳನ್ನು ತಡೆಯುವಲ್ಲಿ ಮತ್ತು ನಿಯಂತ್ರಿಸುವಲ್ಲಿ ವಿಶ್ವಸಂಸ್ಥೆಯ ನ್ಯಾಯಮಂಡಳಿಗಳು ನಡೆಸುತ್ತಿರುವ ಹೋರಾಟ ಶ್ಲಾಘನೀಯ ಎಂದು ಅನಂತ್ ಕುಮಾರ್ ಹೇಳಿದರು.
ಜಾಗತಿಕ ಮಟ್ಟದಲ್ಲಿ ಅಪರಾಧ ಕೃತ್ಯಗಳ ಬಗ್ಗೆ ವಿಚಾರಣೆ ನಡೆಸುವ ಮೆಕ್ಯಾನಿಕಲ್ ಫಾರ್ ಇಂಟರ್ ನ್ಯಾಷನಲ್ ಕ್ರಿಮಿನಲ್ ಟ್ರೆಬ್ಯೂನಲ್ (ಎಂಐಸಿಟಿ) ಕಾರ್ಯ ವಿಧಾನ ತೃಪ್ತಿಕರವಾಗಿದೆ. ಆದರೆ, ಇನ್ನಷ್ಟು ಸುಧಾರಣೆಗೆ ಅವಕಾಶವಿದೆ ಎಂದು ಹೇಳಿದರು.
ಭಾರತದ ಲೋಕಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆಎಚ್ ಪಟೇಲ್ ಅವರು ಇತಿಹಾಸ ನಿರ್ಮಿಸಿದ್ದರು. ಈಗ ಅನಂತ್ ಕುಮಾರ್ ಅವರು ಇಂಥದ್ದೇ ಅನುಕರಣೀಯ ನಡೆ ಇಟ್ಟಿದ್ದಾರೆ.












Click it and Unblock the Notifications