ಬಿಜೆಪಿಯಲ್ಲಿದ್ದರೆ ಮಾತ್ರ ಬಿಎಸ್ ವೈಗೆ ಬೆಲೆ : ಡಿವಿಎಸ್

ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೊಸ ಪಕ್ಷ ಕಟ್ಟುವುದಿಲ್ಲ. ಬೇರೆ ಪಕ್ಷಕ್ಕೂ ಹೋಗುವುದಿಲ್ಲ. ಅವರದ್ದು ಹೇಳಿಕೆ ರಾಜಕಾರಣ ಅಷ್ಟೇ ಎಂದಿದ್ದರು.
ನಂತರ, ಪಕ್ಷ ಕಟ್ಟುವವರು ಮಾಡಿ ತೋರಿಸುತ್ತಾರೆ. ಸುಮ್ಮನ್ನೆ ಮಾತಾಡುತ್ತಾ ಕಾಲಹರಣ ಮಾಡುವುದಿಲ್ಲ. ಬೇರೆ ಪಕ್ಷಕ್ಕೆ ಹೋದರೆ ಇಲ್ಲಿರುವ ಮರ್ಯಾದೆ ಸಿಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದರು.
ಯಡಿಯೂರಪ್ಪ ಅವರು ಹೋರಾಟದಿಂದಲೇ ಅಧಿಕಾರ ಪಡೆದವರು. ರಾಜ್ಯ ಬಿಜೆಪಿ ಸರ್ಕಾರದ ನೇತೃತ್ವ ವಹಿಸಿ ಜನ ಸಾಮಾನ್ಯರ ಬದುಕಿನಲ್ಲಿ ಬೆಳಕು ಮೂಡಿಸುವಂತಹ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ, ಆದರೆ, ಬೇರೆ ಕಡೆ ಹೋದರೆ ಇದೆಲ್ಲವೂ ಅವರ ಬೆನ್ನ ಹಿಂದೆ ಬರುವುದಿಲ್ಲ.
ಇದೇ ಆತಂಕದಲ್ಲಿ ಬಿಎಸ್ ಯಡಿಯೂರಪ್ಪ ಅವರ ಬೆನ್ನ ಹಿಂದೆ 50-60 ಶಾಸಕರೂ ಇದ್ದಾರೆ ಎಂದು ಸದಾನಂದ ಗೌಡ ಹೇಳಿದ್ದಾರೆ. ಯಡಿಯೂರಪ್ಪ ಅವರು ಪಕ್ಷ ಬಿಟ್ಟ ಮೇಲೆ ಈ ಸಂಖ್ಯೆ ಎಷ್ಟಾಗುವುದು ಎಂಬುದನ್ನು ಕಾದು ನೋಡಿ ಎಂದು ಸದಾನಂದ ಗೌಡ ಅವರು ಭಾಗಮಂಡಲದಲ್ಲಿ ಹೇಳಿದ್ದಾರೆ.
ಈಶ್ವರಪ್ಪ ದೆಹಲಿಗೆ : ಈ ನಡುವೆ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರನ್ನು ಬಿಜೆಪಿ ಹೈ ಕಮಾಂಡ್ ಕರೆಸಿಕೊಂಡಿದೆ ಎಂಬ ಸುದ್ದಿದೆ. ಸಂಸದ ಪ್ರಹ್ಲಾದ್ ಜೋಶಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಡಿಸಿಎಂ ಈಶ್ವರಪ್ಪ ಅವರು ದೆಹಲಿ ಹಾದಿ ಹಿಡಿದಿದ್ದಾರೆ.
ನವದೆಹಲಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ಈಶ್ವರಪ್ಪ ಅವರ ತಂಡ ಚರ್ಚಿಸಲಿದೆ. ಪ್ರಮುಖವಾಗಿ ಬಿಎಸ್ ಯಡಿಯೂರಪ್ಪ ಅವರು ಪಕ್ಷ ತೊರೆಯುವ ಬಗ್ಗೆ ಎಲ್ಲೆಡೆ ನೀಡುತ್ತಿರುವ ಹೇಳಿಕೆ. ಅವರ ಬೆಂಬಲಿಗರನ್ನು ಉಳಿಸಿಕೊಳ್ಳುವ ಬಗೆ. ಮುಂದಿನ ಚುನಾವಣೆ ಬಗ್ಗೆ ಗಡ್ಕರಿ ಅವರೊಂದಿಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications