ಬಿಜೆಪಿ ಬಿಡ್ತೀನಿ ಆದ್ರೆ RSS ಬಿಡೋಲ್ಲ: ಯಡಿಯೂರಪ್ಪ

ಇನ್ನೇನು ಆಗ್ಲೋ ಈಗ್ಲೋ ಬಿಜೆಪಿಗೆ ರಾಜೀನಾಮೆ ಬಿಸಾಕುವ ಉಮೇದಿಯಲ್ಲಿರುವ ಯಡಿಯೂರಪ್ಪ ಅವರು 'ಡಿಸೆಂಬರ್ ವೇಳೆಗೆ ಹೊಸ ಪ್ರಾದೇಶಿಕ ಪಕ್ಷ ಕಟ್ಟಿದರೂ ಸಂಘ-ಪರಿವಾರದೊಂದಿಗಿನ ಸಂಬಂಧ ಬಿಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೊಸ ಪಕ್ಷ ರಚನೆ ಸಂಬಂಧ ಹುಬ್ಬಳ್ಳಿಯಲ್ಲಿ ಆಪ್ತರೊಂದಿಗೆ ಸಮಾಲೋಚನೆ ನಡೆಸಲು ಬಂದಿದ್ದ ಅವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
ಗಮನಾರ್ಹವೆಂದರೆ ಕೊನೆಕೊನೆಗೆ ಯಡಿಯೂರಪ್ಪ ಅವರಿಗೆ ಕಂಟಕವಾಗಿದ್ದು ಬಿಜೆಪಿಗಿಂತ ಹೆಚ್ಚಾಗಿ ಸಂಘ ಪರಿವಾರದವರು. ಹಾಗಾಗಿ, RSS ಬಿಡೋಲ್ಲ ಎನ್ನುತ್ತಿರುವ ಯಡಿಯೂರಪ್ಪ ಬಗ್ಗೆ RSS ನಿಲುವೇನು ಎಂಬುದು ಕುತೂಹಲಕಾರಿಯಾಗಿದೆ.
ಯಡಿಯೂರಪ್ಪ ಇನ್ನೇನು ಹೇಳಿದರು: ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಮುದಾಯದವರಿಗೆ ನ್ಯಾಯ ಒದಗಿಸಿದ್ದೇನೆ. ಜಾತ್ಯತೀತ ನೀತಿಯನ್ನು ಅನುಸರಿಸಿ ಕೆಲಸ ಮಾಡಿದ್ದೇನೆ. ಇದು ಬಿಜೆಪಿ ನಾಯಕರಿಗೆ ಹಿಡಿಸಲಿಲ್ಲ. ಇದರ ಫಲವಾಗಿ ವಿವಿಧ ತೊಂದರೆಗಳನ್ನು ಅನುಭವಿಸಿದೆ. ಹೀಗಾಗಿ ಪಕ್ಷ ಬಿಡುವ ಯೋಚನೆ ಮಾಡಬೇಕಾಗಿ ಬಂತು. ಮತ್ತೆ ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ರಚನೆಗೆ ಕಳೆದ 2 ತಿಂಗಳಿನಿಂದ ಚಿಂತನೆ ನಡೆಸಿದ್ದು, ಎಲ್ಲ ಸಿದ್ಧತೆಯೂ ನಡೆದಿದೆ. ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚಿಸಲಾಗಿದೆ.
ಹೊಸ ಪಕ್ಷ ರಚನೆಯ ಹಿನ್ನೆಲೆಯಲ್ಲಿ ಎಲ್ಲ ವರ್ಗದ ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದ ಮುಖಂಡರ ಜೊತೆಗೂ ಮಾತುಕತೆ ನಡೆದಿದೆ. ಹೊಸ ಪಕ್ಷಕ್ಕೆ ಯಾವ್ಯಾವ ಮುಖಂಡರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ಯಡಿಯೂರಪ್ಪ ಅವರೊಂದಿಗಿದ್ದ ಕರ್ನಾಟಕ ಕೈಮಗ್ಗ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ, 'ಯಡಿಯೂರಪ್ಪ ಸ್ಥಾಪಿಸುವ ಪಕ್ಷ ಸೇರಲು ವಿಧಾನಸಭೆಯ 70 ಸದಸ್ಯರು, ವಿಧಾನಪರಿಷತ್ನ 20 ಸದಸ್ಯರು ಹಾಗೂ 12 ಸಂಸದರು ಸಿದ್ಧರಿದ್ದಾರೆ' ಎಂದರು. ಯಡಿಯೂರಪ್ಪ ಅವರು ಶನಿವಾರ ಹೈದರಾಬಾದ್---_ಕರ್ನಾಟಕ ಪ್ರದೇಶದ ವಿವಿಧ ಜಿಲ್ಲೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.












Click it and Unblock the Notifications