ಕುಕ್ಕೆ ಸುಬ್ರಹ್ಮಣ್ಯ ಕಾಲೇಜಿನಲ್ಲಿ ಬುರ್ಖಾ ಬ್ಯಾನ್: ಖಂಡನೆ

'ಕಾಲೇಜಿನ ಈ ಅವಿವೇಕದ ಆದೇಶದಿಂದ ಬುರ್ಖಾಧಾರಿ ವಿದ್ಯಾರ್ಥಿನಿಯರು ಮಾರ್ಗದ ಬದಿಯಲ್ಲಿಯೇ ಬುರ್ಖಾ ಕಳಚಿ ಶಾಲೆಗೆ ಹೋಗುವ ದಯನೀಯ ಪರಿಸ್ಥಿತಿ ಉಂಟಾಗಿದೆ' ಎಂದು ಭರತ್ ಮುಂಡೋಡಿ ಕಿಡಿಕಾರಿದರು. ಈ ಬೇಡಿಕೆಗೆ 15 ದಿನದೊಳಗೆ ಸರಕಾರ ಪ್ರತಿಕ್ರಿಯೆ ನೀಡದೇ ಇದ್ದರೆ ಸಾರ್ವಜನಿಕರು ಪಕ್ಷಾತೀತವಾಗಿ ಪ್ರತಿಭಟನೆ ಮಾಡಲಿದ್ದಾರೆ ಎಂದೂ ಅವರು ಎಚ್ಚರಿಸಿದ್ದರು.
ಸುಬ್ರಹ್ಮಣ್ಯದ ವೆಲಂಕಣಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಲೇಜಿನ ಪ್ರವೇಶ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿಯ ಹಸ್ತಕ್ಷೇಪ, ಸಂಘ ಪರಿವಾರದವರಿಗೆ ಒತ್ತು, ವಿದ್ಯಾಸಂಸ್ಥೆಯ ಆವರಣದೊಳಗೆ ಬುರ್ಖಾ ನಿಷೇಧ ಇವುಗಳು ದೇಶದ ಸಾರ್ವತ್ರಿಕ ಶಿಕ್ಷಣ ನೀತಿಗೆ ವಿರುದ್ಧವಾಗಿದೆ ಎಂದರು.
'ಪದವಿ ಕಾಲೇಜಿಗೆ ಸೇರ್ಪಡೆಗೊಂಡಿರುವ ಸುಮಾರು 15ರಷ್ಟು ವಿದ್ಯಾರ್ಥಿನಿಯರು ಈ ಹಿಂದೆ ಸಾಂಪ್ರದಾಯಿಕ ಬುರ್ಖಾವನ್ನು ಕಾಲೇಜಿನ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಬದಲಾಯಿಸಿ ಉಳಿದ ವಿದ್ಯಾರ್ಥಿನಿಯರಂತೆ ಸಮವಸ್ತ್ರ ಧರಿಸಿ ಕಾಲೇಜಿನ ಪಠ್ಯ ಹಾಗೂ ಪಠ್ಯೇತರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಆದರೆ ಇದೀಗ ಕಾಲೇಜಿನ ಆವರಣಕ್ಕೂ ಬುರ್ಖಾ ಧರಿಸಿ ಬರುವುದು ನಿಷೇಧ ಎಂಬ ಆದೇಶ ಹೊರಡಿಸಲಾಗಿದೆ' ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ. ಸದಸ್ಯ ಕೆ.ಎಸ್. ದೇವರಾಜ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಸಿ. ಜಯರಾಂ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಲೀಲಾ ಮನಮೋಹನ್, ತಾ.ಪಂ. ಸದಸ್ಯ ವಿಮಲಾರಂಗಯ್ಯ, ವಸಂತ ಕುಮಾರ್ ಕೆದಿಲ, ರವೀಂದ್ರಕುಮಾರ್ ರುದ್ರಪಾದ, ಕಷ್ಣಮೂರ್ತಿ ಭಟ್, ಹರೀಶ್ ಇಂಜಾಡಿ, ಗುಣವರ್ಧನ ಕೆದಿಲ, ವಿನಯ ನೆಕ್ರಾಜೆ, ಸತೀಶ್ ಕೂಜುಗೋಡು ಉಪಸ್ಥಿತರಿದ್ದರು.
ಸಮಾನತೆಗಾಗಿ ಸಮವಸ್ತ್ರ: ಮಂಡಳಿ ಸ್ಪಷ್ಟನೆ
ಸುಬ್ರಹ್ಮಣ್ಯ ದೇವಸ್ಥಾನ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ. ಶ್ರೀ ಕ್ಷೇತ್ರದ ವತಿಯಿಂದ ಸೇವಾ ರೂಪದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ಸಂಸ್ಕೃತಿಗೆ ಪೂರಕ ವಾತಾವರಣ ಮತ್ತು ಅವಕಾಶಗಳನ್ನು ಕಲ್ಪಿಸುವ ಪ್ರಯತ್ನ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ದೇವಸ್ಥಾನದ ವಠಾರ ಹಾಗೂ ದೇವಳ ನಡೆಸುವ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳು ಒಂದೇ ಎನ್ನುವ ಭಾವನೆ ರೂಪಿಸುವ ದೃಷ್ಟಿಯಿಂದ ಸಮವಸ್ತ್ರ ಅಳವಡಿಸಲಾಗಿದೆ.
ಈಗ ಕೆಲವೊಂದು ರಾಜಕೀಯ ಶಕ್ತಿಗಳು ಅನಗತ್ಯವಾಗಿ ಮೂಗು ತೂರಿಸುತ್ತಿರುವುದರಿಂದ ಶ್ರೀಕ್ಷೇತ್ರದ ಶಾಂತಿ ಹಾಳು ಮಾಡಲು ಯತ್ನಿಸಿರುವುದು ವಿಷಾದನೀಯ ಎಂದು ಎಂದು ಕಾಲೇಜಿನ ಆಡಳಿತ ಮಂಡಳಿಯ ಪರವಾಗಿ ಕಷ್ಣಪ್ರಸಾದ್ ಮಡ್ತಿಲ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications