ಗೋ ಹತ್ಯೆ ನಿಷೇಧ ಮಸೂದೆಗೆ ಕೇಂದ್ರ ಸರ್ಕಾರ ಕೊಕ್ಕೆ
ಕರ್ನಾಟಕ ಗೋ ಹತ್ಯೆ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ 2010ರ ಅನುಗುಣದಂತೆ ಹಸು, ಎತ್ತೆ, ಕೋಣ ಸೇರಿದಂತೆ ರಾಸುಗಳ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿತ್ತು. ಆರೋಪಿಗಳಿಗೆ ಜಾಮೀನು ರಹಿತ ಸಜೆ ನೀಡಲಾಗುತ್ತದೆ.
ರಾಜ್ಯ ಸರ್ಕಾರ ಇದರಲ್ಲಿ ಸಣ್ಣ ತಿದ್ದುಪಡಿ ತಂದಿದ್ದು ಕಾಯ್ದೆಯಲ್ಲಿನ ಸೆಕ್ಷನ್ (2) ರಲ್ಲಿನ ಗೋವು ಉಲ್ಲೇಖ ಆದ ಮೇಲೆ ಸೆಕ್ಷನ್ (2) ಬಿ ಯಲ್ಲಿ ಬುಲ್ ಮತ್ತು ಬುಲಕ್ ಎಂದು ಸೇರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಸ್. ಸುರೇಶ್ಕುಮಾರ್ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.
2008ರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಅದರಂತೆ ವಿಧಾನಮಂಡಲದ ಎರಡೂ ಸದನಗಳಲ್ಲಿ ವಿಧೇಯಕಕ್ಕೆ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ವಿಧೇಯಕ್ಕೆ ಅಂಕಿತ ಹಾಕುವ ಬದಲಿಗೆ ವಿಧೇಯಕವನ್ನು ರಾಷ್ಟ್ರಪತಿ ಗಳಿಗೆ ರವಾನಿಸಿದ್ದರು.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ, ಕರ್ನಾಟಕ ಪ್ರಾಣಿ ವಧೆ ನಿರ್ಮೂಲನ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕದ ವ್ಯಾಪ್ತಿ ಯಿಂದ ಎಮ್ಮೆಗಳು, ಎಮ್ಮೆಗಳ ಕರುಗಳು ಮತ್ತು ಇತರೆ ಜಾನುವಾರುಗಳನ್ನು ಕೈಬಿಟ್ಟು ವಿಧೇಯಕಕ್ಕೆ ಸಣ್ಣ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಅದರಂತೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ನಂತರವೂ ಈವರೆಗೆ ವಿಧೇಯಕಕ್ಕೆ ಒಪ್ಪಿಗೆ ದೊರೆತಿಲ್ಲ. ಕೃಷಿಗಾಗಿ ಗೋಸಂಪತ್ತು ಸಂರಕ್ಷಿಸಬೇಕೆಂದು ಸಂವಿಧಾನದ 48ನೇ ಪರಿಚ್ಛೇದದಲ್ಲೇ ಹೇಳಿರುವಂತೆ 1964ರ ಗೋಹತ್ಯಾ ನಿಷೇಧ ಕಾಯ್ದೆಗೆ ಸಣ್ಣ ತಿದ್ದುಪಡಿ ತಂದು ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
1964ರ ಕರ್ನಾಟಕ ಗೋಹತ್ಯೆ ನಿಷೇಧ ವಿಧೇಯಕಕ್ಕೆ ತಿದ್ದುಪಡಿ ತರುವ ಸಲುವಾಗಿ 2009ರಲ್ಲಿ ಅಂದಿನ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ, ಅವರ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ವಿವಿಧ ರಾಜ್ಯಗಳ ಗೋಹತ್ಯೆ ನಿಷೇಧ ವಿಧೇಯಕದಲ್ಲಿನ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ರೂಪಿಸಿದ್ದ ಕರಡು ನೀತಿಯ ಬಗ್ಗೆ ಚರ್ಚಿಸಿ ಸಿದ್ಧಪಡಿಸಿದ್ದ ಕರಡು ಪತ್ರಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.
ರಾಜ್ಯಪಾಲರ ವಿರೋಧ: ವಿಪಕ್ಷಗಳು ಇದು ಆರೆಸ್ಸೆಸ್ , ವಿಎಚ್ ಪಿ ಪ್ರೇರಿತ ಮಸುದೆಯಾಗಿದೆ ಎಂದು ಪ್ರಬಲವಾಗಿ ವಿರೋಧಿಸಿದರು. ಆದರೆ, ವಿಧಾನಮಂಡಲದ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಿ ಧ್ವನಿಮತದಿಂದ ಅಂಗೀಕರಿಸಲಾಗಿತ್ತು.
ಸದನದಲ್ಲಿ ಅಂಗೀಕರಿಸಿದ ವಿಧೇಯಕವನ್ನು ಅಂಕಿತಕ್ಕಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು. ಆದರೆ, ವಿಧೇಯಕಕ್ಕೆ ಅಂಕಿತ ಹಾಕುವ ಬದಲಿಗೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ರಾಷ್ಟ್ರಪತಿಗಳಿಗೆ ವಿಧೇಯಕ ರವಾನಿಸಿ ಕೈತೊಳೆದುಕೊಂಡಿದ್ದರು. ಈಗ ಮತ್ತೊಮ್ಮೆ ಗೃಹ ಸಚಿವಾಲಯದ ಅನುಮತಿ ಸಿಗದೆ ಬಿಜೆಪಿ ಸರ್ಕಾರ ಮುಖಭಂಗ ಅನುಭವಿಸಿದೆ.