ಯಲಹಂಕ ವಿಶ್ವನಾಥ್ ತನಿಖೆಗೆ ಬೋಪಯ್ಯ ಮೀನಮೇಷ
ವಿಶ್ವನಾಥ್ ಅಕ್ರಮ ಆಸ್ತಿ ಸಂಪಾದಿಸಿರುವುದು ದೃಢಪಟ್ಟಿದೆ ಎಂದು ಲೋಕಾಯುಕ್ತ ಪೊಲೀಸರು ಆಗಸ್ಟ್ 5ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಅದಾದನಂತರ ಕೆಲವೇ ದಿನಗಳಲ್ಲಿ ಯಲಹಂಕ ಶಾಸಕ ವಿಶ್ವನಾಥ್ ವಿರುದ್ಧ ಆರೋಪಪಟ್ಟಿ ದಾಖಲಿಸುವುದಕ್ಕೆ ಅನುಮತಿ ನೀಡುವಂತೆ ಸ್ಪೀಕರ್ ಬೋಪಯ್ಯಗೆ ಲೋಕಾ ಪೊಲೀಸರು ಪತ್ರ ಬರೆದಿದ್ದರು.
ಕಾನೂನು ಏನು ಹೇಳುತ್ತದೆ?: ಆದರೆ ಸ್ಪೀಕರ್ ಬೋಪಯ್ಯ ಅವರು ಇನ್ನೂ ಇದಕ್ಕೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಶಾಸಕ ವಿಶ್ವನಾಥ್ ವಿರುದ್ಧ ಕಾನೂನು ಕುಣಿಕೆ ಬಿಗಿಗೊಳಿಸುವುದಕ್ಕೆ ಲೋಕಾಯುಕ್ತ ಪೊಲೀಸರಿಗೆ ಸ್ವಲ್ಪ ಹಿನ್ನಡೆಯಾಗಿದೆ. ಕಾನೂನು ಪ್ರಕಾರ ಅನುಮತಿ ನೀಡುವುದಕ್ಕೆ ಸ್ಪೀಕರ್ 3 ತಿಂಗಳ ಕಾಲ ಸಮಯ ವ್ಯರ್ಥ ಮಾಡಬಹುದು.
ಅದಾದನಂತರವೂ ಸ್ಪೀಕರ್ ಅನುಮತಿಯ ಮುದ್ರೆಯೊತ್ತದಿದ್ದರೆ ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ಡೀಮ್ಡ್ ಪರವಾನಗಿ (ಅನುಮತಿ ನೀಡಲಾಗಿದೆ) ದೊರೆತಿದೆ ಎಂದು ಪರಿಭಾವಿಸಿಕೊಳ್ಳಬಹುದು. ಅಂದರೆ ಮೌನಂ ಸಮ್ಮತಿ ಲಕ್ಷಣ ಎಂದು ಬಗೆದು ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ದಾಖಲಿಸಬಹುದು.
ಶಿಕ್ಷೆಗೆ ಅರ್ಹ ಪ್ರಕರಣ: ಲೋಕಾಯುಕ್ತ ಅಧಿಕಾರಿಗಳ ಪ್ರಕಾರ ಇದುವರೆಗಿನ ತನಿಖೆಯಂತೆ ವಿಶ್ವನಾಥ್ ವಿರುದ್ಧ ದಾಖಲಾಗಿರುವ ಖಾಸಗಿ ದೂರಿನಲ್ಲಿ ಸತ್ಯಾಂಶವಿದೆ. ಸದರಿ ಶಾಸಕರು ತಮ್ಮ ಆದಾಯಕ್ಕಿಂತ ಶೇ. 160 ಪಟ್ಟು ಹೆಚ್ಚು ಸಂಪತ್ತು ಗಳಿಸಿರುವ ಲೋಕಾ ತನಿಖೆಯಿಂದ ಪತ್ತೆಯಾಗಿದೆ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಪ್ರಕಾರ ಇದು ಶಿಕ್ಷೆಗೆ ಅರ್ಹವಾದ ಪ್ರಕರಣವಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಅಭಿಪ್ರಾಪಟ್ಟಿದ್ದಾರೆ.