ಸಮೀಕ್ಷೆ ಫಲ: ಯಡಿಯೂರಪ್ಪಗೆ ಮಣೆ ಹಾಕಲಿದೆಯೇ ಬಿಜೆಪಿ?

ಏಕೆಂದರೆ, ಕರ್ನಾಟಕದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ಬೇಕೇ ಬೇಕು ಎಂದು ಆಂಗ್ಲ ಸುದ್ದಿವಾಹಿನಿ NDTV ಸಮೀಕ್ಷೆಯಿ0ದ ವಾಸ್ತವವನ್ನು ತೆರೆದಿಟ್ಟಿದ್ದೇ ತಡ, ಬರ ಪ್ರವಾಸದಲ್ಲಿ ವಿಜೃಂಭಿಸುತ್ತಿದ್ದ ಯಡಿಯೂರಪ್ಪನವರತ್ತ ದಿಲ್ಲಿಯಿಂದಲೇ ಪಕ್ಷದ ವರಿಷ್ಠರು ಬಿಳಿಬಾವುಟ ಹಾರಿಸಿದ್ದಾರೆ.
ಇಂತಹ ಒಂದು ಅವಕಾಶಕ್ಕಾಗಿ ಜೀವತೇಯುತ್ತಿದ್ದ ಯಡಿಯೂರಪ್ಪನವರೂ ಭಾನುವಾರ ಸಂಜೆ ವೇಳೆಗೆ ದೆಹಲಿ ತಲುಪಿಕೊಂಡಿದ್ದಾರೆ. ಬುಧವಾರ ಅವರು ವಾಪಸಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಪಕ್ಷದ ವರಿಷ್ಠ ಅರುಣ್ ಜೇಟ್ಲಿ ಅವರಿಗೆ ಆಂಗ್ಲ ವಾಹಿನಿ NDTV ಮೇಲೆ ತುಂಬು ಗೌರವ. ಹಾಗಾಗಿ, ಆ ವಾಹಿನಿಯ ಸಮೀಕ್ಷೆಗೆ ಬೆಚ್ಚಿಬಿದ್ದು 'ಯಡಿಯೂರಪ್ಪಾಜೀ ದಿಲ್ಲಿಗೆ ಬಂದುಹೋಗಿ' ಎಂದಿದ್ದಾರೆ.
ಅಲ್ಲಿಗೆ, ಸಿಎಂ ಪದವಿ ತ್ಯಜಿಸಿದ ದಿನದಿಂದಲೂ ಅನಭಿಷಕ್ತ ದೊರೆಯಂತೆ ಮಿಂಚುತ್ತಿರುವ ಯಡಿಯೂರಪ್ಪ ಅವರತ್ತ ಬಿಜೆಪಿಯ ದೆಹಲಿ ದಂಡು ಶಾಂತವಾಗಿದೆ ಎಂಬುದು ವೇದ್ಯವಾಗಿದೆ. 'ಗುಜರಾತ್ ವಿಧಾನಸಭೆ ಚುನಾವಣೆಯ ಇಂಚುಮುಂಚಿನಲ್ಲಿ ಕರ್ನಾಟಕದಲ್ಲೂ ಚುನಾವಣೆ ನಡೆದುಹೋಗಲಿ. ನೀವೇ ಪಕ್ಷದ ಸಾರಥ್ಯ ವಹಿಸಿ' ಎಂಬುದು ಹೈಕಮಾಂಡ್ ಸಂದೇಶವಿರಬಹುದು ಎಂದು ಪಕ್ಷದ ಮೂಲಗಳು ಪಿಸುಗುಟ್ಟುತ್ತಿವೆ.
ಕುತೂಹಲದ ಸಂಗತಿಯೆಂದರೆ ಇದುವರೆಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನನಗೆ ಬೇಕೇ ಬೇಕು ಎಂದು ವರಾತ ತೆಗೆದಿದ್ದ ಸದಾನಂದ ಗೌಡರಿಂದ ಇದೇ ವೇಳೆ 'ರಾಜ್ಯಾಧ್ಯಕ್ಷ ಸ್ಥಾನ ನನಗೆ ಬೇಡ' ಎಂದು ಹೇಳಿಸಲಾಗಿದೆ. ಇದರಿಂದ ಯಡಿಯೂರಪ್ಪ ಪಟಾಲಂ ಇನ್ನೇನು ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿಯೇಬಿಟ್ಟರು ಎಂದು ಕುಣಿಕುಣಿದಾಡುತ್ತಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಕೆನಡಾದಿಂದ ವಾಪಸಾಗುತ್ತಿದ್ದಂತೆ ರಾಜ್ಯಕ್ಕೆ ಹೊಸ ಸಾರಥಿಯನ್ನು ನೇಮಕ ಮಾಡುವ ಪ್ರಕ್ರಿಯೆಗೆ ಅಂಕಿತ ಹಾಕಲಿದ್ದಾರೆ ಎನ್ನಲಾಗಿದೆ. ಅದಕ್ಕೂ ಮುನ್ನ ಲಿಂಗಾಯತರ ಅಧಿನಾಯಕನನ್ನು ಒಮ್ಮೆ ಮಾತನಾಡಿಸೋಣ ಎಂಬ ಇರಾದೆ ಇದಾಗಿದೆ.












Click it and Unblock the Notifications