ಕಬಾಬ್ ಹಂಚಿಕೊಂಡ್ರು ಸಲಿಂಗಕಾಮಿ ಕೊಂದ್ಬಿಟ್ರು
ರಾಮ್ ರಹೀಂ ಬಡಾವಣೆಯ ನಿವಾಸಿ ಅಬ್ದುಲ್ ವಾಹಿದ್ ಎಂಬುವರ ಮಗ ಶಕೀಲ್ ಸಾಯುವ ಮುನ್ನ ಆತನ ತಲೆ ಮೇಲೆ ಸಲಿಂಗಕಾಮಿ ಎಂಬ ಹಣೆಪಟ್ಟಿ ಏನೂ ಇರಲಿಲ್ಲ. ಆದರೆ, ಜೊತೆಗಿದ್ದ ಗೆಳೆಯರೇ ಆತನು ಆತ್ಮೀಯವಾಗಿ ಕೈ ಹಾಕಿದ್ದನ್ನು ತಪ್ಪಾಗಿ ತಿಳಿದು ಕುಡಿದ ಮತ್ತಿನಲ್ಲಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
26 ವರ್ಷದ ಶಕೀಲ್ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಸಲಿಂಗಕಾಮ, ಹಲ್ಲೆ ಪ್ರಕರಣಗಳು ದಾಖಲಾಗಿತ್ತು. ಇದು ಆತನ ಗೆಳೆಯರ ಗುಂಪಿಗೂ ತಿಳಿದಿತ್ತು. ಕಳೆದ ರಾತ್ರಿ ಶಕೀಲ್ ತನ್ನ ಮಾವನ ಬೈಕ್ ತೆಗೆದುಕೊಂಡು ಹೋದವನು ಮತ್ತೆ ವಾಪಸ್ ಆಗಿಲ್ಲ.
ಬುಧವಾರ ಬೆಳಗ್ಗೆ ಪಟ್ಟಣದ ಜಯಲಕ್ಷ್ಮಿ ನಂಜಪ್ಪ ಕಲ್ಯಾಣಮಂಟಪದ ಬಳಿ ಶಕೀಲ್ ಹೆಣವಾಗಿ ಪತ್ತೆಯಾಗಿದ್ದಾನೆ. ಶವದ ಬಳಿ ನಿನ್ನೆ ರಾತ್ರಿ ತೆಗೆದುಕೊಂಡು ಹೋಗಿದ್ದ ಬೈಕು, ಮದ್ಯದ ಬಾಟಲಿ, ಕಬಾಬ್ ತುಂಡುಗಳು ಪತ್ತೆಯಾಗಿದೆ.
ಶಕೀಲ್ ಪರಿಚಿತರೇ ಈ ಕೃತ್ಯ ಎಸೆಗಿರುವ ಶಂಕೆ ವ್ಯಕ್ತವಾಗಿದ್ದು, ಕೊಲೆ ನಡೆಯುವುದಕ್ಕೂ ಮುನ್ನ ಜಗಳ ನಡೆದಿರುವ ಸಾಧ್ಯತೆಯಿದೆ. ಯಾವುದೋ ಹಳೆ ದ್ವೇಷದ ಕಾರಣ ಕಲ್ಲಿನಿಂದ ತಲೆ ಜಜ್ಜಿ ಕೊಂದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರಿನ ನಾಯಂಡನಹಳ್ಳಿ ಸಮೀಪದ ವೀರಭದ್ರನಗರದಲ್ಲಿ ಗ್ಯಾಸ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಶಕೀಲ್, ರಂಜಾನ್ ಹಬ್ಬಕ್ಕೂ ಮುನ್ನ ಮದ್ದೂರಿಗೆ ಬಂದಿದ್ದ. ರಂಜಾನ್ ನಂತರವೂ ಮದ್ದೂರಿನಲ್ಲೇ ಶಕೀಲ್ ಉಳಿದಿದ್ದ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಉತ್ತಪ್ಪ, ಸಿಪಿಐ ಪ್ರಕಾಶ್, ಎಸ್ ಐ ಮಹೇಶ್, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.