ಅಮರ್ ಜವಾನ್ ಸ್ಮಾರಕ ಗಲಭೆ, ಒಬ್ಬನ ಸೆರೆ
ಆ.11 ರಂದು ನಡೆದಿದ್ದ ಗಲಭೆ ಸಂದರ್ಭದಲ್ಲಿ ದುಷ್ಕರ್ಮಿಗಳಿಬ್ಬರು ಅಮರ್ ಜವಾನ್ ಸ್ಮಾರಕಕ್ಕೆ ಅಗೌರವ ತೋರಿಸಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗಿ ಸ್ವಾಭಿಮಾನಿ ದೇಶಭಕ್ತರನ್ನು ಕೆರಳಿಸಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಬ್ದುಲ್ ಖಾದೀರ್ ಎಂಬುವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯಲ್ಲಿ ಇನ್ನೊಬ್ಬ ಆರೋಪಿಯೂ ಇರುವುದು ಪತ್ತೆಯಾಗಿದೆ. ಆತನಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಜಾದ್ ಮೈದಾನ ಹಿಂಸಾಚಾರ ಘಟನೆ ಸಂಬಂಧ ಈವರೆಗೂ 51 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಹಿಂಸಾಚಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹಿಂಸಾಚಾರ ನಡೆದು 2 ಮೃತಪಟ್ಟಿದ್ದರು. 44 ಪೊಲೀಸರು ಸೇರಿದಂತೆ ಒಟ್ಟು 50 ಜನ ಗಾಯಗೊಂಡಿದ್ದರು.
ಪೊಲೀಸರ ಹತೋಟಿ ತಪ್ಪಿದ್ದ ಈ ಗಲಭೆಯಲ್ಲಿ ಪೊಲೀಸ್ ವ್ಯಾನ್, ಪತ್ರಕರ್ತರ ಕ್ಯಾಮರಾ, ಬಸ್ ಗಳು ಜಖಂಗೊಂಡಿತ್ತು. ಅನೇಕ ಮಹಿಳಾ ಕಾನ್ಸ್ ಟೇಬಲ್ ಗಳು ಕಲ್ಲೇಟು ತಿಂದು ಆಸ್ಪತ್ರೆ ಸೇರಿದ್ದರು.
ಆರೋಪಿಗಳಿಗೆ ರಕ್ಷಣೆ?: ಈ ಘಟನೆಯಲ್ಲಿ ಆರೋಪಿಗಳಾಗಿದ್ದವರಲ್ಲಿ ಹಲವರನ್ನು ನಿರಪರಾಧಿಗಳು ಎಂದು ಕೋರ್ಟ್ ಘೋಷಿಸಿ ಮನೆಗೆ ಕಳಿಸಿದೆ. ಸೋಮವಾರ ಕೂಡಾ ಮೂವರು ಅರೋಪಿಗಳನ್ನು ಖುಲಾಸೆಗೊಳಿಸಲಾಯಿತು.
ಕ್ರೈಂ ಬ್ರಾಂಚ್ ಬಂಧಿಸಿದ್ದ ಅನೀಸ್ ದವಾರೆ, ಅಸ್ಲಾಂ ಶೇಖ್ ಹಾಗೂ ಅಬ್ಬಾಸ್ ಉಜ್ಜೈನ್ ವಾಲಾ ಅವರನ್ನು ಐಪಿಸಿ ಸೆಕ್ಷನ್ 169 ರ ಅಡಿಯಲ್ಲಿ ನಿರ್ದೋಷಿಗಳೆಂದು ಪರಿಗಣಿಸಿ ಮುಕ್ತಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.