ಬಿಜೆಪಿ ಕಾಂಗ್ರೆಸ್ ಒಳ ಜಗಳದಲ್ಲಿ ರಾಮುಲುಗೆ ಲಾಭ

ರಾಷ್ಟ್ರಮಟ್ಟದ ಪಕ್ಷಗಳನ್ನು ಎದುರು ಹಾಕಿಕೊಳ್ಳುವ ಧೈರ್ಯ ಹಾಗೂ ಸಾಹಸಕ್ಕೆ ಮುಂದಾಗಿರುವ ಶ್ರೀರಾಮುಲು ಅವರಿಗೆ ಜನ ಬಲ ಇದೆ ಎಂಬುದು ನಿಜವಾದರೂ ಈ ಪರಿ ಆತ್ಮ ವಿಶ್ವಾಸ ಮೂಡಿರುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ.
ಬಿಜೆಪಿಯ ಒಳಜಗಳದಿಂದ ಫಲವಾಗಿ ಬರ ಪ್ರವಾಸ ಇಬ್ಭಾಗವಾಗಿರುವ ನಾಯಕರ ಅಕ್ಕ ಪಕ್ಕ ನಿಲ್ಲುವ ಶಾಸಕರು, ಸಚಿವರುಗಳ ಮೇಲೆ ವಿಪಕ್ಷಗಳು ಕಣ್ಣಿಟ್ಟಿದೆ. ಇದರಿಂದ ಬಿಎಸ್ ಯಡಿಯೂರಪ್ಪ ಹಾಗೂ ಸದಾನಂದ ಗೌಡ ಬಣದಲ್ಲಿ ಗುರುತಿಸಿಕೊಳ್ಳುವ ಶಾಸಕರ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ.
ಈಶ್ವರಪ್ಪ ಅವರಿಂದ ತೆರವಾಗಲಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಿಸುತ್ತಾರೋ ಅದರ ಮೇಲೆ ಬಿಜೆಪಿಯ ಮುಂದಿನ ಭವಿಷ್ಯ ಅಡಗಿದೆ. ಏಕೆಂದರೆ ಮುಂದಿನ ಚುನಾವಣೆಗೆ ಯಾವ ಸ್ಪರ್ಧಿಗೆ ಟಿಕೇಟ್ ನೀಡಬೇಕು ಎಂಬುದರ ಬಗ್ಗೆ ನಿರ್ಧಾರ ರಾಜ್ಯಾಧ್ಯಕ್ಷ ಹಾಗೂ ಹೈಕಮಾಂದ್ ಕೈಲಿರುತ್ತದೆ.
ಬಿಜೆಪಿಗೆ ಹೊಡೆತ : ಲಭ್ಯ ಮಾಹಿತಿ ಪ್ರಕಾರ ಬಿಜೆಪಿಯ ಹಾಲಿ 15ರಿಂದ 20 ಮಂದಿ ಶಾಸಕರಿಗೆ ಟಿಕೇಟ್ ಕೈ ತಪ್ಪುವ ಸಾಧ್ಯತೆ ಇದೆ.
ಎಸ್.ಅಂಗಾರ( ಸುಳ್ಯ), ಜಿ.ಎನ್. ನಂಜುಂಡ ಸ್ವಾಮಿ(ಕೊಳ್ಳೆಗಾಲ), ವೈ.ಸಂಪಂಗಿ(ಕೆ.ಜಿ.ಎಫ್), ರಘುಪತಿ ಭಟ್ (ಉಡುಪಿ), ವಿ.ವಿ.ನಾಗ ರಾಜ್(ನೆಲಮಂಗಲ), ಸಾರ್ವಭೌಮ ಬಗಲಿ(ಇಂಡಿ), ಎಂ.ಪಿ.ಕುಮಾರಸ್ವಾಮಿ (ಮೂಡಿಗೆರೆ), ಮಾನಪ್ಪ ವಜ್ವಲ್ (ಲಿಂಗಸೂರು), ರಾಜೂ ಕಾಗೆ (ಕಾಗವಾಡ), ಸುರೇಶ್ ಬಾಬು (ಕಂಪ್ಲಿ), ಬಿ.ನಾಗೇಂದ್ರ (ಕೂಡ್ಲಿಗಿ), ಸೋಮಶೇಖರ ರೆಡ್ಡಿ (ಬಳ್ಳಾರಿ ನಗರ), ಕೆ.ಲಕ್ಷ್ಮೀನಾರಾಯಣ (ಬೈಂದೂರು), ಎಚ್.ಎಸ್. ಶಂಕರಲಿಂಗೇಗೌಡ (ಚಾಮರಾಜ ನಗರ), ಹಾಲಪ್ಪ (ಸೊರಬ), ಬೇಳೂರು ಗೋಪಾಲಕೃಷ್ಣ (ಸಾಗರ) ಸಹಿತ ಇನ್ನೂ ಕೆಲವು ಶಾಸಕರಿಗೆ ಬಿಜೆಪಿ ಪಕ್ಷದಿಂದ ಟಿಕೇಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ.
ಹೀಗಾಗಿ ಚುನಾವಣೆ ಹತ್ತಿರ ಬಂದಾಗ ಅತಂತ್ರ ಸ್ಥಿತಿಗೆ ತಲುಪುವುದು ಬೆಡ ಎಂದು ಈ ಶಾಸಕರು ಈಗಲೇ ಕಾಂಗ್ರೆಸ್ ಜೆಡಿಎಸ್ನ ಬಾಗಿಲು ತಟ್ಟುತ್ತಿದ್ದಾರೆ. ಇನ್ನು ಕೆಲವರು ಶ್ರೀರಾಮುಲು ಅವರ ಬಿಎಸ್ಆರ್ ಪಕ್ಷದತ್ತ ಒಲವು ಹರಿಸಿದ್ದಾರೆ.
ಈ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೇಟು ಡದಿರಲು ಆರ್ಎಸ್ಎಸ್ ತಿಳಿಸಿದೆ. ಸಚಿವ ಸ್ಥಾನಕ್ಕಾಗಿ ಕೆಲವು ಶಾಸಕರು ರೆಸಾರ್ಟ್ ರಾಜಕೀಯ ನಡೆಸಿದ್ದು, ಇನ್ನು ಕೆಲವರು ಭ್ರಷ್ಟಾಚಾರದಿಂದ ಜೈಲು ಸೇರಿದ್ದು ಮತ್ತೆ ಕೆಲವರು ಸಂಘ ಪರಿವಾರಕ್ಕೆ ತಿರುಗಿ ಬಿದ್ದಿರುವುದು ಕಾರಣವಾಗಿದೆ. ಸುಳ್ಯ ಶಾಸಕ ಅಂಗಾರ ಅವರು ಸಚಿವಸ್ಥಾನ ಕಳೆದುಕೊಳ್ಳಲು ಕಲ್ಲಡ್ಕ ಪ್ರಭಾಕರ ಭಟ್ರ ಹಸ್ತಕ್ಷೇಪದಿಂದ ಕೈತಪ್ಪಿ ಹೋಯಿತು ಎಂದಿದ್ದ ಅವರು ಮಾಜಿ ಶಾಸಕ ಶ್ರೀನಿವಾಸ ಶೆಟ್ಟಿಯವರ ಆಪ್ತರಾಗಿರುವುದೂ ಕಾರಣವಾಗಿದೆ.
ಒಂದು ವೇಳೆ ಯಡಿಯೂರಪ್ಪ ಅಪ್ತರಿಗೆ ರಾಜ್ಯಾಧ್ಯಕ್ಷ ಪಟ್ಟ ಸಿಗದಿದ್ದರೆ ಬಹುತೇಕ ಜನಪ್ರಿಯ ಶಾಸಕರು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಾರೆ. ಅತ್ತ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಜಿ ಪರಮೇಶ್ವರ್ ಅವರಿಗೆ ಖಾಯಂಗೊಂಡಿರುವುದರಿಂದ ಸಿಟ್ಟಿಗೆದ್ದಿರುವ ಲಿಂಗಾಯತರು ಈಗ ಬಿಎಸ್ ಆರ್ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ.
ಹೀಗಾಗಿ ಎರಡೂ ಕಡೆಯ ಒಳಜಗಳದ ಲಾಭ ಅನಾಯಾಸವಾಗಿ ಬಿಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಆಗಲಿದ್ದು, ಮುಂದಿನ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುವ ಲಕ್ಷಣಗಳ ಮುನ್ಸೂಚನೆ ಈಗಲೇ ಸಿಕ್ಕಿದೆ.












Click it and Unblock the Notifications