ಲೈಂಗಿಕ ಕಿರುಕುಳ: ತಿರುಪತಿಯಲ್ಲಿ ಪ್ರೊಫೆಸರ್ ದಂಪತಿ ಸೆರೆ
ಪ್ರೊ. ರಾವ್ ಕುಡುಕರಾಗಿದ್ದು ಅವರ ಮೇಲೆ ಲೈಂಕಿಗ ಕಿರುಕುಳ ಆರೋಪ ಹೊರಿಸಲಾಗಿದೆ. ಇನ್ನು, ಅವರ ಪತ್ನಿ ವಿಜಯಕುಮಾರಿ, ತಮ್ಮ ಪತಿ ಪ್ರೊ. ರಾವ್ ಅವರ ಲೈಂಗಿಕ ಬೇಡಿಕೆಗೆ ಒಳಗಾಗುವಂತೆ ವಿಶ್ವವಿದ್ಯಾಲಯದ ಪಿಎಚ್. ಡಿ ವಿದ್ಯಾರ್ಥಿನಿಯರಿಗೆ ಒತ್ತಡ ಹೇರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಲೈಂಗಿಕ ಕಾಮನೆಗಳನ್ನು ಪೂರೈಸುವುದಾದರೆ ತ್ವರಿತವಾಗಿ ಪಿಎಚ್. ಡಿ ಪಡೆಯುವುದಕ್ಕೆ ಸಹಕರಿಸುವುದಾಗಿ ಸಂಶೋಧನಾ ವಿದ್ಯಾರ್ಥಿನಿಯರಿಗೆ ಪ್ರೊ. ರಾವ್ ಹೇಳುತ್ತಿದ್ದರು ಎಂದು ದೂರಲಾಗಿದೆ. ತಿರುಪತಿಯ ಸ್ಥಳೀಯ ನ್ಯಾಯಾಲಯ ಪ್ರೊ. ರಾವ್ ದಂಪತಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.
'ಆತನನ್ನು ತೃಪ್ತಿ ಪಡೆಸದಿದ್ದರೆ ಎಂದಿಗೂ ನಾವು ಪಿಎಚ್. ಡಿ ಪದವಿ ಪಡೆಯುವುದಕ್ಕೆ ಸಾಧ್ಯವಾಗದೆಂದು ಪ್ರೊ. ರಾವ್ ಧಮರ್ಕಿ ಹಾಕುತ್ತಿದ್ದರು' ಎಂದು ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ತಮ್ಮ ಪಡಿಪಾಟಲನ್ನು ತೋಡಿಕೊಂಡಿದ್ದಾರೆ. 'ಆ ಪ್ರೊಫೆಸರ್ ಮಹಾಶಯ ಅಮಲಿನಲ್ಲಿ ತೂರಾಡುತ್ತಾ ರಾತ್ರಿ ಹೊತ್ತು ನಮ್ಮ ಹಾಸ್ಟೆಲಿಗೆ ಬಂದುಬಿಡುತ್ತಿದ್ದ' ಎಂದೂ ಆ ವಿದ್ಯಾರ್ಥಿನಿ ದೂರಿದ್ದಾಳೆ.
'ಇದರ ಬಗ್ಗೆ ಪ್ರೊ. ರಾವ್ ಅವರ ಪತ್ನಿ ವಿಜಯಕುಮಾರಿ ಅವರ ಬಳಿ ಮಾತನಾಡಲು ಹೋದರೆ ಆಯಮ್ಮನೇ ನಮ್ಮ ಮೇಲೆ ಬೈಗುಳ ಪ್ರಯೋಗ ಮಾಡುತ್ತಿದ್ದಳು. ನಮಗೆ ನೆರವಾಗುವ ಬದಲು ತನ್ನ ಪತಿಯನ್ನು ಲೈಂಗಿಕವಾಗಿ ತೃಪ್ತಿ ಪಡಿಸು' ಎಂದು ತಾಕೀತು ಮಾಡುತ್ತಿದ್ದಳು ಎಂದು ಮತ್ತೊಬ್ಬ ವಿದ್ಯಾರ್ಥಿನಿ ಅಲವತ್ತುಕೊಂಡಿದ್ದಾಳೆ.
'ದಂಪತಿಯ ಕಾಟದಿಂದ ಇದರಿಂದ ಬೇಸತ್ತು ಪೊಲೀಸರಿಗೆ ದೂರು ನೀಡುವ ಮುನ್ನ ವಿವಿ ಅಧಿಕಾರಿಗಳ ಕಿವಿಗೂ ವಿಷಯ ಹಾಕಿದೆವು' ಎಂದು ಬಾಧಿತ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರು ಪ್ರೊ. ರಾವ್ ದಂಪತಿಯ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ದಾಖಲಿಸಿದರು. 'ಈ ಹಿಂದಿನ ಬ್ಯಾಂಚಿನ ವಿದ್ಯಾರ್ಥಿನಿಯರು ನನ್ನ ಲೈಂಗಿಕ ಕಾಮನೆಗಳನ್ನು ಪೂರೈಸಿ, ಅಲ್ಪಾವಧಿಯಲ್ಲಿ ಪಿಎಚ್. ಡಿ ಪೂರೈಸಿಕೊಂಡು ಹೋಗಿದ್ದಾರೆಂದು ಪ್ರೊ. ರಾವ್ ತಮ್ಮನ್ನು ಪುಸಲಾಯಿಸಿದ್ದಾಗಿ' ಸದರಿ ದೂರುದಾರರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಆ ಬಗ್ಗೆಯೂ ಈಗ ತನಿಖೆ ನಡೆಸುವುದಾಗಿ ಅಪರಾಧ ತನಿಖಾ ದಳದ ಉಪ ಮಹಾ ನಿರ್ದೇಶಕ ಎ ದಾಮೋದರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರೊ. ರಾವ್ ಅವರನ್ನು ತಕ್ಷಣ ಅಮಾನತು ಮಾಡಬೇಕೆಂದು ಶ್ರೀ ವೇಂಕಟೇಶ್ವರ ಯೂನಿವರ್ಸಿಟಿಯ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಮೊದಲು ವಿದ್ಯಾರ್ಥಿನಿಯರು ವೈಸ್ ಚಾನ್ಸಲರ್ ಎನ್ ಪ್ರಭಾಕರ್ ಅವರಿಗೆ ದೂರು ನೀಡಿದರು. ಆದರೆ ಆತ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಆದರೆ ವಿದ್ಯಾರ್ಥಿನಿಯರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಅವರು ವಿದ್ಯಾರ್ಥಿನಿಯರ ದೂರನ್ನು ನಮಗೆ ಕಳಿಸಿಕೊಟ್ಟರು ಎಂದು ದಾಮೋದರ್ ಹೇಳಿದ್ದಾರೆ.