ಕಸ ಎತ್ತಲಾಗುತ್ತೆ ಡೋಂಟ್ ವರಿ: ಮೇಯರ್
ಮೂರು ದಿನಗಳಿಂದ ಪಾಲಿಕೆ ಆಸ್ಪತ್ರೆ ಮತ್ತು ಶಾಲೆಗಳಲ್ಲಿ ಸೇವೆ ಸ್ಥಗಿತಗೊಂಡಿತ್ತು. ಬಹುತೇಕ ಬಡಾವಣೆಗಳ ಮನೆ ಮುಂದೆ ಕಸದ ದೊಡ್ಡ ರಾಶಿ ಬೆಳೆಯುತ್ತಿತ್ತು. ಪೌರ ಕಾರ್ಮಿಕರ ಜೊತೆಗೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನೌಕರರು ಸೇರಿಕೊಂಡಿದ್ದರಿಂದ ಸಮಸ್ಯೆ ಉಲ್ಬಣಿಸಿತ್ತು.
ಬಿಬಿಎಂಪಿ ನೌಕರರ ಸಂಘದ ಮುಖಂಡರಾದ ಆರ್ ಸುಬ್ರಮಣ್ಯಂ, ಕೆಟಿ ನಾಗರಾಜ್, ಪಿ ದಯಾನಂದ್ ಅವರೊಡನೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಅಶೋಕ್ ಸಭೆ ನಡೆಸಿದರು. ನಗರದ ಕಸದ ರಾಶಿ ಹೆಚ್ಚುವುದರಿಂದ ಡೆಂಘಿ ರೋಗ ಉಲ್ಬಣಗೊಳ್ಳುವ ಶಂಕೆ ವ್ಯಕ್ತವಾಗಿದ್ದರಿಂದ ಕಸ ವಿಲೇವಾರಿ ಕಡೆ ಗಮನ ಹರಿಸುವಂತೆ ಶೆಟ್ಟರ್ ಸೂಚಿಸಿದರು.
ನಾಳೆಯಿಂದ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಬಿಬಿಎಂಪಿ ನೌಕರರು ಭರವಸೆ ನೀಡಿದರೂ ನಾಳೆ 2ನೇ ಶನಿವಾರ ಹಾಗೂ ನಾಡಿದ್ದು ಭಾನುವಾರವಾದ್ದರಿಂದ ನೌಕರರು ಇನ್ನೂ ಸ್ವಚ್ಛತೆಗಾಗಿ ಪೊರಕೆ ಹಿಡಿಯಲು ಸೋಮವಾರದ ತನಕ ಕಾಯಬೇಕಿದೆ.
ಬಿಬಿಎಂಪಿ ಅಧಿಕಾರಗಳ ಮೇಲೆ ಸುಖಾಸುಮ್ಮನೆ ಪ್ರಕರಣ ದಾಖಲಿಸಿರುವ ಆರೋಪ ಹೊತ್ತಿರುವ ಬಿಎಂಟಿಫ್ ಮುಖ್ಯಸ್ಥ ಆರ್ ಪಿ ಶರ್ಮ ವಿರುದ್ಧ ಬಿಬಿಎಂಪಿ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದರು. ಮೂರು ದಿನಗಳ ಬಿಬಿಎಂಪಿ ನೌಕರರು ಮುಷ್ಕರ ಹೂಡಿದ್ದು ಇದೇ ಮೊದಲಾಗಿದೆ.
ಕಸದ ಸಮಸ್ಯೆ: ಕಸದ ಮೇಲೆ ತೆರಿಗೆ ಹಾಕಿ ಕೋಟಿಗಟ್ಟಲೇ ಹಣ ಗಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಹಣವನ್ನು ಸದ್ವಿನಿಯೋಗ ಮಾಡಿಲ್ಲ ಆಸ್ತಿ ತೆರಿಗೆ ಜೊತೆಗೆ ಘನ ತ್ಯಾಜ್ಯ ನಿರ್ವಹಣೆ ನೆಪದಲ್ಲಿ ಕಸದ ಮೇಲೂ (garbage cess) ತೆರಿಗೆ ವಿಧಿಸಿರುವುದು ಖಾಸಗಿ ಏಜೆನ್ಸಿಗಳಿಗೆ ಮುಳುವಾಗಿದೆ.
2011ರಿಂದ ಇಲ್ಲಿಯವರೆಗೂ 27 ಕೋಟಿ ರು ಗಳಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಕಸದಿಂದಲೇ 5 ಕೋಟಿ ಲಭ್ಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಿಬಿಎಂಪಿ ತೆರಿಗೆ ಸಂಗ್ರಹಿಸಲು ಆರಂಭಿಸಿದ ಮೇಲೆ ಖಾಸಗಿ ಏಜೆನ್ಸಿಗಳಿಗೆ ಘನ ತ್ಯಾಜ್ಯ ನಿರ್ವಹಣೆ ಕೆಲಸ ನೀಡುವುದನ್ನು ಅಪಾರ್ಟ್ಮೆಂಟ್ ಗಳು ನಿಲ್ಲಿಸಿದ್ದಾರೆ. ಆದರೆ ತೆರಿಗೆ ಮಾತ್ರ ಸಂಗ್ರಹಿಸುವ ಬಿಬಿಎಂಪಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಎನ್ ಜಿಒಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.