ಮಂಗಳೂರು ದಾಳಿ ಪ್ರಕರಣ: ಯಾರು ಏನು ಹೇಳಿದರು?
ದೇಶದಾದ್ಯಂತ ಸಂಚಲನ ಮೂಡಿಸಿರುವ ಈ ಪ್ರಕರಣದ ಬಗ್ಗೆ ಹಲವು ಗಣ್ಯರು, ಸಾರ್ವಜನಿಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಂಗಳೂರು ದಾಳಿ ಪ್ರಕರಣ: ಯಾರು ಏನು ಹೇಳಿದರು? ಪ್ರಮುಖಾಂಶ ಇಲ್ಲಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ: 'ಉಡುಪಿಯಲ್ಲಿ ರೇವ್ ಪಾರ್ಟಿ ಮಾಡಲು ಇದೇ ಸರ್ಕಾರದವರು ಅನುಮತಿ ನೀಡುತ್ತಾರೆ. ಇಲ್ಲಿ ಮಂಗಳೂರಿನಲ್ಲಿ ಯುವತಿಯರ ಮೇಲೆ ಹಲ್ಲೆ ನಡೆಸಲು ಬಿಟ್ಟಿದ್ದಾರೆ. ಈ ಘಟನೆ ಹಿಂದೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸ್ಥಳೀಯ ಜನಪ್ರತಿನಿಧಿಗಳ ಕೈವಾಡ, ಕುಮ್ಮಕ್ಕು ಇದೆ. ನಾನು ಘಟನೆಯನ್ನು ಖಂಡಿಸುತ್ತೇನೆ. ಸದನದಲ್ಲಿ ಈ ಬಗ್ಗೆ ದನಿ ಎತ್ತುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದಿದ್ದಾರೆ.
ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ: ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ನಡೆದಿರಲಿಲ್ಲ. ಅಲ್ಲಿ ಬರ್ಥ್ ಡೇ ಪಾರ್ಟಿ ನಡೆದಿತ್ತು. ಸಂಜೆ ಸುಮಾರು 6.30 ರ ಸುಮಾರಿಗೆ 13 ಜನ ಸೇರಿದ್ದರು, 5 ಯುವತಿಯರು, 8 ಜನ ಯುವಕರು ಇದ್ದರು. ಹಲ್ಲೆಗೊಳಗಾದವರು ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. 8 ಜನರ ಬಂಧನವಾಗಿದೆ. ಬಂಧಿತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಇನ್ನೂ ಕೆಲ ಆರೋಪಿಗಳ ಹುಡುಕಾಟ ಜಾರಿಯಲ್ಲಿದೆ.
ಜಗದೀಶ್ ಕಾರಂತ್, ಹಿಂಜಾವೇ: ಮಂಗಳೂರಿನಲ್ಲಿರುವ ಹೋಮ್ ಸ್ಟೇ, ರೆಸಾರ್ಟ್, ವಿಕೇಂಡ್ ಪಾರ್ಟಿ ಕೇಂದ್ರಗಳ ಲೈಸನ್ಸ್ ಬಗ್ಗೆ ಮೊದಲು ಪರೀಶೀಲನೆಯಾಗಲಿ. ಸುಸಂಸ್ಕೃತ ನಾಡು ಎನಿಸಿರುವ ನಮ್ಮ ಜಿಲ್ಲೆಯಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡುವುದು ಸರಿಯಿಲ್ಲ. ಇದು ಹಿಂದೂ ಸಂಘಟನೆಗಳ ಕೂಗಲ್ಲ. ಸ್ಥಳೀಯ ನಾಗರೀಕರ ಆಕ್ರೋಶದ ಪ್ರತೀಕವಾಗಿ ಈ ದಾಳಿ ನಡೆದಿದೆ. ದಾಳಿ ಮಾಡಿದವರು ಹಿಂದೂ ಜನಜಾಗರಣ ವೇದಿಕೆ ಸದಸ್ಯರಲ್ಲ.
ಅಗ್ನಿಶ್ರೀಧರ್, ಪ್ರಗತಿಪರ ಚಿಂತಕರು: ಗುವಾಹಟಿ ದೌರ್ಜನ್ಯ ಪ್ರಕರಣ ಕಣ್ಮುಂದೆ ಇರುವಾಗಲೇ ಅದಕ್ಕಿಂತ ಘೋರವಾದ ಅಪರಾಧ ನಮ್ಮ ರಾಜ್ಯದಲ್ಲಿ ನಡೆದಿರುವುದು ದುರದೃಷ್ಟಕರ. ಹೆಣ್ಣು ಮಕ್ಕಳನ್ನು ಎಳೆದಾಡಿ, ಅಸಭ್ಯವಾಗಿ ವರ್ತಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಇದು ರಾಜ್ಯಕ್ಕೆ ಅಪಮಾನಕರ ಸಂಗತಿ.
ಪಂಡಿತಾರಾಧ್ಯಶ್ರೀ ಸ್ವಾಮೀಜಿ : ಹಿಂದೂ ಧರ್ಮ ಅವಾಂತರದಿಂದ ಕೂಡಿದೆ. ಮಾನವೀಯತೆ ಎತ್ತಿ ಹಿಡಿಯಲು, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು.ಹಿಂದೂ ಸಂಸ್ಕೃತಿ ಎಂಬುದೇ ಇಲ್ಲ.
ಎಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ: ಕರಾವಳಿಯಲ್ಲಿ ಕೆಲ ಹಿಂದೂ ಸಂಘಟನೆಗಳು ಬಹುಕಾಲದಿಂದ ದೌರ್ಜನ್ಯ ನಡೆಸುತ್ತಾ ಬರುತ್ತಿದೆ. ಗೃಹ ಇಲಾಖೆ ಬರೀ ಬಿ ರಿಪೋರ್ಟ್ ಸಲ್ಲಿಸಲು ಮಾತ್ರ ಅಸ್ತಿತ್ವದಲ್ಲಿ ಎನಿಸುತ್ತದೆ. ಸರ್ಕಾರದ ಸ್ಥಳೀಯ ಜನ ಪ್ರತಿನಿಧಿಗಳು ಇಂಥವರಿಗೆ ಪ್ರೋತ್ಸಾಹ ನೀಡುತ್ತಿರುವ ಶಂಕೆ ಇದೆ.
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ: ಯಾವುದೇ ಅನೈತಿಕ ಚಟುವಟಿಕೆ ಹತ್ತಿಕ್ಕಲು ಕಾನೂನು ಇದೆ, ಪೊಲೀಸರು ಇದ್ದಾರೆ. ಎಲ್ಲೋ ಒಂದು ಕಡೆ ಮರ್ಡರ್ ಆಗುತ್ತೆ. ಅದಕ್ಕೆ ಪ್ರತಿಯಾಗಿ ಹೋಗಿ ಮರ್ಡರ್ ಮಾಡೋಕೆ ಆಗುತ್ತಾ. ಹಿಂದೂ ಜಾಗರಣ ವೇದಿಕೆಯಾಗಲಿ ಯಾರೇ ಆಗಲಿ. ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ. ಆದರೆ, ಬಿಜೆಪಿ ಸರ್ಕಾರ ಇದರಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ.