ಯಡಿಯೂರಪ್ಪ ವಿರುದ್ಧ ಮತ್ತೆ ಲೋಕಾಯುಕ್ತ ತನಿಖೆ
ಶಿವಮೊಗ್ಗದ ವಕೀಲ ಬಿ ವಿನೋದ್ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾ ಎನ್ ಕೆ ಸುಧೀಂದ್ರರಾವ್ ಅವರು ಯಡಿಯೂರಪ್ಪ,ರಾಘವೇಂದ್ರ ಸೇರಿದಂತೆ ಐದು ಜನರ ಮೇಲೆ ಸಿಆರ್ ಪಿಸಿ ಸೆಕ್ಷನ್ 202ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಮಂಗಳವಾರ (ಜು.24)ಆದೇಶ ನೀಡಿದರು.
ಬೆಂಗಳೂರು ನಗರ ಲೋಕಾಯುಕ್ತ ಡಿಎಸ್ ಪಿ ನಹದ್ ಅವರು ಈ ಪ್ರಕರಣದ ತನಿಖೆ ಕೈಗೊಳ್ಳುವ ಅಧಿಕಾರಿಯಾಗಿದ್ದಾರೆ. ದೂರುದಾರ ವಿನೋದ್ ಅವರು ಕೋರ್ಟಿಗೆ ಸಲ್ಲಿಸಿರುವ ದೂರು ಅರ್ಜಿ ಹಾಗೂ ಇತರೆ ದಾಖಲಾತಿಯ ಒಂದು ಪ್ರತಿಯನ್ನು ತನಿಖಾಧಿಕಾರಿಗಳಿಗೆ ನೀಡಬೇಕಾಗುತ್ತದೆ. ಸಿಆರ್ ಪಿಸಿ 202 ಅಡಿಯಲ್ಲಿ ದೂರು ದಾಖಲಾಗಿರುವುದರಿಂದ ಸದ್ಯಕ್ಕೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸುವುದಿಲ್ಲ.
ಆದರೆ, ತನಿಖೆ ಸಂದರ್ಭದಲ್ಲಿ ಅಕ್ರಮ ಒತ್ತುವರಿ ಆರೋಪಗಳು ಸಾಬೀತುಪಡಿಸುವ ಅಂಶಗಳು ಕಂಡು ಬಂದರೆ ಎಫ್ ಐಆರ್ ದಾಖಲಿಸಲು ಲೋಕಾಯುಕ್ತ ಕೋರ್ಟ್ ಅನುಮತಿ ಕೋರಬಹುದಾಗಿದೆ. ಕೋರ್ಟ್ ಅನುಮತಿ ನೀಡಿದ ಬಳಿಕ ಮುಂದಿನ ಕ್ರಮ ಜರುಗಿಸಬಹುದು. ಅಥವಾ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿದ್ದರೆ ದೂರು ರದ್ದಾಗುತ್ತದೆ.
2010ರಲ್ಲಿ ಭದ್ರಾವತಿ ಬಳಿ ಅಕ್ರಮವಾಗಿ 69 ಎಕರೆ ಅರಣ್ಯವನ್ನು ಒತ್ತುವರಿ ಮಾಡಿ, ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಡಿನೋಟಿಫೈ ಆದ ಮೇಲೆ ಧವಳಗಿರಿ ಪ್ರಾಪರ್ಟಿಸ್ ಬೇನಾಮಿ ಹೆಸರು ಖಾತೆ ಹೆಸರಿನಲ್ಲಿ ಖರೀದಿಸಲಾಗಿದೆ.
ಭದ್ರಾವತಿ ಸುತ್ತಾ ಮುತ್ತಾ ಸುಮಾರು 250 ಎಕರೆಗೂ ಅಧಿಕ ಅರಣ್ಯ ಭೂಮಿಯನು ರಕ್ಷಿತಾರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಆದರೆ, 2010-2011ರ ಅವಧಿಯಲ್ಲಿ ಅಕ್ರಮವಾಗಿ ಒತ್ತುವರಿ ಮೂಲಕ ಅಪಾರ ಹಣವನ್ನು ಯಡಿಯೂರಪ್ಪ ಸಂಗ್ರಹಿಸಿದ್ದಾರೆ ಎಂದು ವಿನೋದ್ ಆರೋಪಿಸಿದ್ದಾರೆ.